ಶಿವಮೊಗ್ಗ :- ಜೈ ಶ್ರೀರಾಮ್ ಬಿಜೆಪಿ ಆಸ್ತಿ ಅಲ್ಲ, ಪ್ರಪಂಚದ ಹಿಂದೂಗಳ ಆಸ್ತಿ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೀರೋ ಆಗಿದ್ದಾರೆ. ಕರ್ನಾಟಕದ ಜನರ ಮುಂದೆ ಸಿದ್ದರಾಮಯ್ಯ ವಿಲನ್ ಆಗಿದ್ದಾರೆ ಎಂದರು.
ಮೋದಿ ನಾಯಕರಾಗಿದ್ದಾರೆ, ಸಿದ್ದರಾಮಯ್ಯ ಖಳನಾಯಕರಾಗಿದ್ದಾರೆ. ಎಲ್ಲಾ ಮುಗಿದ ಮೇಲೆ ಈಗ ಜೈ ಶ್ರೀರಾಮ್ ಅಂತಾ ಕೂಗಿದ್ದಾರೆ. ಕೊನೆಗೂ ಅವರಿಗೆ ರಾಮ ಬುದ್ಧಿ ಕೊಟ್ನಲ್ಲ ಅಂತಾ ಸಂತಸವಾಗಿದೆ. ಜೈ ಶ್ರೀರಾಮ್ ಬಿಜೆಪಿ ಆಸ್ತಿ ಅಲ್ಲ, ಪ್ರಪಂಚದ ಹಿಂದೂಗಳ ಆಸ್ತಿ. ಬರೀ ಮುಸಲ್ಮಾನರನ್ನೇ ಇಟ್ಟುಕೊಂಡರೆ ಬದುಕುವುದಕ್ಕೆ ಆಗಲ್ಲ. ಹಿಂದೂಗಳು ಕೂಡ ಬೇಕು ಅಂತಾ ಕೊನೆಗೂ ಸಿದ್ದರಾಮಯ್ಯಗೆ ಬುದ್ಧಿ ಬಂದಿದೆ. ದೇವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಳ್ಳೆಯದು ಮಾಡಲಿ ಎಂದರು.
ಶಿವಮೊಗ್ಗ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ಪರಿವರ್ತನೆ ಜಗದ ನಿಯ. ಶ್ರೀರಾಮಚಂದ್ರ ಎಲ್ಲರ ಮನಸ್ಸನ್ನ ಗೆಲ್ಲತ್ತಾನೆ. 500 ವರ್ಷಗಳ ಕಾಲ ಸಹನೆಯಿಂದ ಇದ್ದ. ಶ್ರೀರಾಮ ಚಂದ್ರ ಅವನ ಜನ್ಮಸ್ಥಳದಲ್ಲಿ ರಾಮಮಂದಿರ ಮಾಡಿಕೊಂಡಿರುವುದು ಅವನ ತಾಕತ್ತು. ಸಿದ್ದರಾಮಯ್ಯ ಅಂತಹವರ ಬಾಯಲ್ಲಿ ಕೂಡ ಜೈ ಶ್ರೀರಾಮ್ ಬರುತ್ತದೆ ಎಂದರೆ ರಾಮನೇ ಕಾರಣ ಹೊರತು ಸಿದ್ದರಾಮಯ್ಯ ಅಲ್ಲ ಎಂದರು.
ಜೈ ಶ್ರೀರಾಮ್ ನಮ್ಮ ಸೊತ್ತು ಅಂತ ನಾವು ಎಲ್ಲಿಯೂ ಹೇಳಿಲ್ಲ. ಆ ಘೋಷಣೆ ಹಿಂದೂಗಳ ಸ್ವತ್ತು. ಭಾರತೀಯರ ಸ್ವತ್ತು. ಜೈ ಶ್ರೀರಾಮ್ ಘೋಷಣೆ ನಿಮ್ಮ ಬಾಯಲಿ ಬಂದಿದೆ ಅಂದರೆ ಅದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದೂ ಸಮಾಜಕ್ಕೆ ಎಷ್ಟು ಅಪಮಾನ ಮಾಡಿದ್ದೀರಾ ನೀವು? ಮುಂದಿನ ದಿನಗಳಲ್ಲಿ ಹಿಂದೂಗಳ ಪರವಾಗಿ ಆಲೋಚನೆ ಮಾಡಿ ಎಂದರು.