ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ 13 ಎಕರೆ ಬೆಲೆಬಾಳುವ ಭೂಮಿಯಲ್ಲಿ ರೈಲ್ವೆ ವೈದ್ಯಕೀಯ ಕಾಲೇಜು ಸ್ಥಾಪಿಸ ಬೇಕೇ ವಿನಹ ಅದನ್ನು ಖಾಸಗಿ ವ್ಯಕ್ತಿಗಳಿಗೆ 99 ವರ್ಷ ಲೀಸ್ ನೀಡಬಾರದು ಎಂದು ನೈರುತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಅಧ್ಯಕ್ಷ ಮಹೇಂದ್ರ ಸಿಂಘಿ ಆಗ್ರಹಿಸಿದ್ದಾರೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಮಂಡಳಿ ಅಧ್ಯಕ್ಷರು ಮತ್ತು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿಯ ಕೇಂದ್ರ ಸ್ಥಳದಲ್ಲಿರುವ ರೈಲ್ವೆ ಭೂಮಿಯಲ್ಲಿ ರೈಲ್ವೆ ವೈದ್ಯಕೀಯ ಸ್ಥಾಪನೆ ಮಾಡಿದರೆ ನೈರುತ್ಯ ರೈಲ್ವೆ ವಲಯದ ಸಾವಿರಾರು ನೌಕರರಿಗೆ ಅನುಕೂಲವಾಗಲಿದೆ ಅಲ್ಲದೆ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಜಮೀನು ರೈಲ್ವೆ ಇಲಾಖೆಗೆ ಉಳಿದುಕೊಳ್ಳಲಿದೆ. 2009- 10ನೇ ಸಾಲಿನ ಕೇಂದ್ರ ರೈಲ್ವೆ ಬಜೆಟ್ ನಲ್ಲಿ ಅಂದಿನ ರೈಲ್ವೆ ಸಚಿವೆ ಆಗಿದ್ದ ಶ್ರೀಮತಿ ಮಮತಾ ಬ್ಯಾನರ್ಜಿಯವರು ನೈರುತ್ಯ ರೈಲ್ವೆ ವಲಯಕ್ಕೆ ರೈಲ್ವೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದಾರೆ.
ಆದರೆ ಈವರೆಗೂ ರೈಲ್ವೆ ಮೆಡಿಕಲ್ ಕಾಲೇಜನ್ನು ಸ್ಥಾಪನೆ ಮಾಡಿಲ್ಲ ಪ್ರಸ್ತಾವಿತ ಮೆಡಿಕಲ್ ಕಾಲೇಜು ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡು ಅದರ ಸುತ್ತಲಿನ ಜಾಗದಲ್ಲಿ ವಾಣಿಜ್ಯ ಕಟ್ಟಡಗಳನ್ನು ರೈಲ್ವೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿದರೆ ನೂರಾರು ಕೋಟಿ ರೂಪಾಯಿ ಆದಾಯವು ಕೂಡ ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆಗೆ ಬರಲಿದೆ ಎಂದು ಸಲಹೆ ನೀಡಿದ್ದಾರೆ.
ನೈರುತ್ಯ ರೈಲ್ವೆ ವಲಯ ಸ್ಥಾಪನೆಗೊಂಡು ಎರಡು ದಶಕಗಳೇ ಕಳೆದಿದೆ ಆದರೂ ಕೂಡ ಇನ್ನೂ ಅನೇಕ ರೈಲ್ವೆ ಇಲಾಖೆ ಕಚೇರಿಗಳು ಹಾಗೂ ರೈಲ್ವೆ ಸಿಬ್ಬಂದಿಗಳು ಮತ್ತು ಪ್ರಯಾಣಿಕರಿಗೆ ಬೇಕಾದ ಹಲವಾರು ಸೌಲಭ್ಯಗಳ ಕಟ್ಟಡಗಳನ್ನು ನಿರ್ಮಿಸಬೇಕಾದ ಅವಶ್ಯಕತೆ ಇದೆ ಮುಂದಿನ 50 ವರ್ಷಗಳ ಕಾಲ ಹುಬ್ಬಳ್ಳಿ ನಗರ ಸಾಕಷ್ಟು ಪ್ರಮಾಣದಲ್ಲಿ ಬೆಳವಣಿಗೆ ಆಗಲಿದ್ದು,
ಅದಕ್ಕೆ ತಕ್ಕಂತೆ ರೈಲ್ವೆ ಇಲಾಖೆ, ಸೌಲಭ್ಯ ಅಭಿವೃದ್ಧಿಪಡಿಸಲು ಹತ್ತಾರು ಎಕರೆ ಭೂಮಿಯ ಅವಶ್ಯಕತೆ ಬೀಳಲಿದೆ. ಹೀಗಾಗಿ ರೈಲ್ವೆ ಇಲಾಖೆ 13 ಎಕರೆ ಜಮೀನನ್ನು 99 ವರ್ಷದ ಲೀಸ್ ಕೊಡುವ ಬದಲು ತನ್ನ ಆಸ್ತಿಯಾಗಿಯೇ ಉಳಿಸಿಕೊಳ್ಳಬೇಕು ಎಂದು ಮಹೇಂದ್ರ ಸಿಂಘಿ ಮನವಿ ಮಾಡಿದ್ದಾರೆ.