ದಕ್ಷಿಣ ಆಫ್ರಿಕಾ ಸರಣಿಯಿಂದ ಹಿಂದೆ ಸರಿದಿದ್ದ ಕಿಶನ್ರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದಲೂ ಹೊರಗಿಡಲಾಗಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿಶನ್ಗೆ ಅವಕಾಶ ನೀಡಬಹುದು ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಆಯ್ಕೆ ಮಂಡಳಿ ಕಿಶನ್ರನ್ನು ಹೊರತುಪಡಿಸಿ ವಿಕೆಟ್ಕೀಪರ್ ವಿಭಾಗದಲ್ಲಿ ಮೂವರು ಆಟಗಾರರಿಗೆ ಅವಕಾಶ ನೀಡಿದೆ. ಹಾಗಾಗಿ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಆಡುವಂತೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಇಶಾನ್ ಕಿಶನ್ಗೆ ಸಲಹೆ ನೀಡಿದ್ದರು.
ಅದರಂತೆ ಇಶಾನ್ ಕಿಶನ್ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡಬೇಕಿತ್ತು. ಆದರೆ ಇಲ್ಲಿಯವರೆಗೆ ಇಶಾನ್ ಕಿಶನ್ ಜಾರ್ಖಂಡ್ ತಂಡವನ್ನು ಸೇರಿಕೊಂಡಿಲ್ಲ. ಮೇಲೆ ಹೇಳಿದಂತೆ ರಾಹುಲ್ ದ್ರಾವಿಡ್ ಅವರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಲು ದೇಶೀಯ ಕ್ರಿಕೆಟ್ನಲ್ಲಿ ಆಡುವಂತೆ ಇಶಾನ್ಗೆ ಸೂಚನೆ ನೀಡಿದ್ದರು. ಆದರೆ ಇಶಾನ್ ಕಿಶನ್ ತಮ್ಮ ಮೊದಲ ರಣಜಿ ಪಂದ್ಯಕ್ಕೆ ಗೈರುಹಾಜರಾಗಿದ್ದಾರೆ.
ಕೆಲ ದಿನಗಳ ಹಿಂದೆ ಬಿಸಿಸಿಐ, ಅನುಚಿತ ವರ್ತನೆಗಾಗಿ ಇಶಾನ್ ಕಿಶನ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಸುದ್ದಿಗಳು ಬೆಳಕಿಗೆ ಬಂದ ನಂತರ ಕೋಚ್ ರಾಹುಲ್ ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಇಶಾನ್ ಕಿಶನ್ ಅವರ ಅನುಚಿತ ವರ್ತನೆಯ ಎಲ್ಲಾ ಸುದ್ದಿ ಸುಳ್ಳು ಎಂದು ಹೇಳಿದ್ದರು. ವಾಸ್ತವವಾಗಿ, ಮಾನಸಿಕ ಒತ್ತಡದಿಂದಾಗಿ ಇಶಾನ್ ಕ್ರಿಕೆಟ್ನಿಂದ ವಿರಾಮ ಕೇಳಿದ್ದರು. ಹೀಗಾಗಿ ಅವರ ಮನವಿಯ ಮೇರೆಗೆ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ರಾಹುಲ್ ಹೇಳಿದ್ದರು.
ಆದರೆ, ಕೆಲ ದಿನಗಳ ಹಿಂದೆ ಇಶಾನ್ ಕಿಶನ್ ಮೈದಾನದಲ್ಲಿ ಕಸರತ್ತು ನಡೆಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇದರಿಂದಾಗಿ ಈಗ ಇಶಾನ್ ಕಿಶನ್ ತಂಡಕ್ಕೆ ಮರಳಬಹುದು ಎಂದು ಅಭಿಮಾನಿಗಳು ಭರವಸೆ ಹೊಂದಿದ್ದರು. ಆದರೆ ಈಗ ಇಶಾನ್ ರಣಜಿ ಟ್ರೋಫಿಯ ಮೊದಲ ಪಂದ್ಯವನ್ನು ಕಳೆದುಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.