ದೊಡ್ಡಬಳ್ಳಾಪುರ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನೈಜ ಷೇರುದಾರ ರೈತರನ್ನು ಹೊರಗಿಟ್ಟು ಅಕ್ರಮ ಹಾಗೂ ಕಾನೂನು ಬಾಹಿರ ಚುನಾವಣೆ ನಡೆಸಲಾಗುತ್ತಿದೆ ಅದ್ದರಿಂದ ಈ ಭಾಗದ ಜನರಲ್ಲಿ ತಾರತಮ್ಯವನ್ನು ಸೃಷ್ಟಿಸಿರುವುದು ಸರಿಯಲ್ಲ ಹಾಗಾಗಿ ಈ ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯನ್ನು ಮುಂದೂಡಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆಗ್ರಹಿಸಿದರು.
ತಾಲೂಕಿನ ಹೊನ್ನಾವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗಂಡರಗೂಳಿಪುರ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಚುನಾವಣಾ ಪ್ರಕ್ರಿಯೆಯು ಸಹಕಾರಿ ಸಂಘಗಳ ನಿಯಮಗಳಿಗೆ ಅನುಗುಣವಾಗಿ ಹಾಗೂ ಕಾನೂನು ರೀತಿಯಲ್ಲಿ ನಡೆಯದೆ ಇರುವುದರಿಂದ ಈ ಭಾಗದ ಮೂಲ ಷೇರುದಾರರಿಗೆ ಅನ್ಯಾಯವಾಗುತ್ತದೆ, ಈ ಸಹಕಾರ ಸಂಘದಲ್ಲಿ ರಾಜಕೀಯ ಪ್ರೇರಿತ ಪಿತೂರಿ ನಡೆಯಿತ್ತಿದೆ.
ಗಂಡರಗೂಳಿಪುರ ಗ್ರಾಮದ ಉದ್ದೇಶಿತ ವಿಎಸ್ಎಸ್ಎನ್ ಕಚೇರಿ ಬಳಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಂಚಾಯತಿ ವ್ಯಾಪ್ತಿಯ 17 ಗ್ರಾಮಗಳಲ್ಲಿ ಅರ್ಹ ಷೇರುದಾರರನ್ನು ಉದ್ದೇಶ ಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಸಂಘವನ್ನು ನೋಂದಣಿ ಮಾಡಿಸುವ ಸಮಯದಲ್ಲಿ ಕೆಲವೇ ಕೆಲವು ಪ್ರವರ್ತಕರನ್ನ ಷೇರುದಾರರಾಗಿ ಇಟ್ಟುಕೊಂಡು, ಉಳಿದ ಪ್ರವರ್ತಕರನ್ನ ಪಟ್ಟಿಯಿಂದ ಕೈಬಿಡಲಾಗಿದೆ.
ಪಹಣಿ ಹೊಂದಿಲ್ಲದ ರೈತರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ, ಚುನಾವಣೆ ಪ್ರಕ್ರಿಯೆಯು ಸಹಕಾರಿ ಸಂಘಗಳ ನಿಯಮಗಳ ಅನ್ವಯ ನಡೆಯುತ್ತಿಲ್ಲ, ಯಾರದೋ ಒತ್ತಡಕ್ಕೆ ಮಣಿದು ಅತುರಾತುರವಾಗಿ ಕದ್ದು ಮುಚ್ಚಿ ಚುನಾವಣೆ ಘೋಷಣೆ ಮಾಡಿರುವುದು ಸರಿಯಲ್ಲ.
ಈ ಭಾಗದಲ್ಲಿ ನೂತನವಾಗಿ ಪ್ರಾರಂಭವಾಗುವ ವಿಎಸ್ಎಸ್ಎನ್ ನ ಚುನಾವಣೆಯಲ್ಲಿ ಪಾರದರ್ಶಕತೆ ಇಲ್ಲದೆ ಅಕ್ರಮವೇ ಎದ್ದುಕಾಣುವ ಕಾರಣ ಚುನಾವಣೆಯನ್ನು ಮುಂದೂಡಬೇಕು.
ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಹಾಗೂ ಎಲ್ಲಾ ರೀತಿಯ ಕಾನೂನು ಹೊರಾಟಗಳಿಗೆ ನಾವು ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಕನಸವಾಡಿ, ಹೊನ್ನಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 800 ಷೇರುದಾರರು ಕನಸವಾಡಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಯಶಸ್ಸಿಗೆ ಕಾರಣರಾಗಿದ್ದಾರೆ.
ರೈತರ ಒತ್ತಾಸೆ ಮೇರೆಗೆ ಕನಸವಾಡಿಯಿಂದ ಬೇರ್ಪಟ್ಟು ಗಂಡರಗೂಳಿಪುರ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದೆ. ಹೊನ್ನಾವರ ಪಂಚಾಯ್ತಿ ವ್ಯಾಪ್ತಿಯ ಷೇರುದಾರರನ್ನು ಕನಸವಾಡಿ ವಿಎಸ್ಎಸ್ಎನ್ ಸೊಸೈಟಿಯಿಂದ ಕೈಬಿಡಲಾಗಿದೆ. ಆದರೆ, ಅಲ್ಲಿ ಸೊಸೈಟಿ ಬೆಳವಣಿಗೆಗೆ ಕಾರಣರಾದ ಷೇರುದಾರರಿಗೆ ಗಂಡರಗೂಳಿಪುರ ವಿಎಸ್ಎಸ್ಎನ್ ನಲ್ಲಿ ಅವಕಾಶ ನೀಡಿಲ್ಲ. ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಿ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್ನ ಕೆಲ ನಾಯಕರು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ನೂತನ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದಲ್ಲಿ ಮುಖ್ಯ ಪ್ರವರ್ತಕರು ಹಾಗೂ ಸುತ್ತಮುತ್ತಲಿನ ಗ್ರಾಮದ ನೈಜ ಸದಸ್ಯರ ಗಮನಕ್ಕೆ ತರದೇ ಸಹಕಾರಿ ಸಂಘಗಳ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಚುನಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಹಾಗೂ ಸಹಕಾರಿ ಸಂಘಗಳ ನೋಂದಣಾಧಿಕಾರಿಗಳಿಗೆ ದೂರು ನಿಡಲಾಗಿದೆ, ಈ ಬಗ್ಗೆ ತಕ್ಷಣವೇ ಪರಿಶೀಲನೆ ನಡೆಸಿ ಚುನಾವಣೆ ಮುಂದೂಡಬೇಕು ಹಾಗೂ ಎಲ್ಲಾ ಸಂಬಂಧ ಪಟ್ಟ ಸದಸ್ಯರನ್ನೂ ಒಳಗೊಂಡಂತೆ ಷೇರುದಾರರನ್ನ ಮತದಾರರ ಪಟ್ಟಿಯಲ್ಲಿ ಸೇರಿಸಿ ನಂತರ ಚುನಾವಣೆ ನಡೆಸಬೇಕು ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಂಡರಗೂಳಿಪುರ ವಿಎಸ್ಎಸ್ಎನ್ ಮುಖ್ಯ ಪ್ರವರ್ತಕ ಗಂಗಾಧರಯ್ಯ ಮಾತನಾಡಿ ಚುನಾವಣೆ ಘೋಷಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನನ್ನ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾಗಿ ಮತದಾರ ಪಟ್ಟಿ ಸರಿಪಡಿಸಿ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಹೊನ್ನಾವರ ಗ್ರಾ.ಪಂ. ಸದಸ್ಯ ಮಾತನಾಡಿ ಈ ಸಹಕಾರಿ ಸಂಘದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮ್ಮ ಮುಖಂಡರಿಗೆ ನಿಷ್ಠೆ ತೋರಿಸುವ ಸಲುವಾಗಿ ತಮಗೆ ಬೇಕಾದವರನ್ನೇ ಷೇರುದಾರರನ್ನಾಗಿಸಿಕೊಂಡು, ಅರ್ಹ ಷೇರುದಾರರನ್ನ ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಈ ಸೊಸೈಟಿಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರು ತಮ್ಮ ಕುಟುಂಬದವರನ್ನೇ ಷೇರುದಾರರನ್ನಾಗಿ ಮಾಡಿಕೊಂಡು ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಈ ರೀತಿಯ ಅಕ್ರಮ ಚುನಾವಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ್, ಮುಖಂಡರಾದ ರಘು ಹಾಗೂ ಸುತ್ತಮುತ್ತಲಿನ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು