ಚಿಕ್ಕಮಗಳೂರು:- ಕಾಲಿಗೆ ಗುಂಡೇಟು ಬಿದ್ದರೂ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಕೊಲೆ ಆರೋಪಿ ಅರೆಸ್ಟ್ ಮಾಡಲಾಗಿದೆ.
ಪೂರ್ಣೇಶ್ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ಶನಿವಾರ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿದ್ದ. ಇಂದು ಮಾಗಲು ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದಾಗ ಬಾಳೆಹೊನ್ನೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆರೋಪಿಯ ಮೇಲೆ 2012 ರಿಂದ 8 ಪ್ರಕರಣಗಳು ದಾಖಲಾಗಿದ್ದವು. 4 ಹಲ್ಲೆ ಹಾಗೂ ಕೊಲೆ ಯತ್ನ, 3 ಹಲ್ಲೆ ಪ್ರಕರಣ ಮತ್ತೊಂದು ಪೊಲೀಸರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಕೋರ್ಟಿನಿಂದ ಸಮನ್ಸ್ ಕೂಡ ಜಾರಿಯಾಗಿತ್ತು. ಆರೋಪಿ ಕೋರ್ಟಿಗೆ ಹಾಜರಾಗದೆ, ಮನೆಯಲ್ಲೂ ವಾಸವಾಗಿರದೆ, ರಾತ್ರಿ ವೇಳೆ ಕಾಡು, ಕಾಫಿ ತೋಟದ ಕಾಡಿನ ದೊಡ್ಡ-ದೊಡ್ಡ ಮರಗಳ ಮೇಲೆ ಮಲಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ.
2023ರ ಅಕ್ಟೋಬರ್ 30ರಂದು ಆತ ಮಾಗಲು ಗ್ರಾಮದ ತನ್ನ ಮನೆಯಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಮಚ್ಚು ಬೀಸಿದ್ದ. ಈ ವೇಳೆ ಪಿಎಸ್ಐ ದಿಲೀಪ್ ಕುಮಾರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆದರೂ ಪೊಲೀಸರ ಮಾತು ಕೇಳದೆ ಪೊಲೀಸ್ ಪೇದೆ ಮಂಜುನಾಥ್ ಎಂಬವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿತ್ತು.
ಆತನ ಆರೈಕೆಗೆ ಕುಟುಂಬಸ್ಥರು ಬಾರದ ಹಿನ್ನೆಲೆ ಪೊಲೀಸರೇ ಆಸ್ಪತ್ರೆಯಲ್ಲಿ ಆತನನ್ನು ನೋಡಿಕೊಳ್ಳುತ್ತಿದ್ದರು. ಈ ವೇಳೆ ಆರೋಪಿ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಕೊನೆಗೂ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ.