ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿರಿಷಭ್ ಪಂತ್ʼಗೆ ಅವಕಾಶ ನೀಡಬೇಕೆಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ. ಜೂನ್ ತಿಂಗಳಲ್ಲಿ 2024ರ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದೆ.
ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಯುಎಸ್ಎ, ಕೆನಡಾ, ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ ಗುಂಪು ಹಂತದ ಪಂದ್ಯಗಳಲ್ಲಿ ಕಾದಾಟ ನಡೆಸಲಿದೆ. ಟಿ20 ವಿಶ್ವಕಪ್ ಭಾರತ ತಂಡಕ್ಕೆ ರಿಷಭ್ ಪಂತ್ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಆ ಮೂಲಕ ವಿಕೆಟ್ ಕೀಪರ್ ಆಯ್ಕೆಗೆ ಪರಿಗಣಿಸಲು ಚರ್ಚೆ ನಡೆಸಬೇಕೆಂದು ತಿಳಿಸಿದ್ದಾರೆ. 2022ರ ಡಿಸೆಂಬರ್ 30 ರಂದು ಭೀಕರ ಕಾರು ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಂತ್, ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಐಪಿಎಲ್ ಟೂರ್ನಿಯ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಎದುರು ನೋಡುತ್ತಿದ್ದಾರೆ.
ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ನೋಡುವುದಕ್ಕೂ ಮುನ್ನ ನಾನು ರಿಷಭ್ ಪಂತ್ ಅವರು ವಿಕೆಟ್ ಕೀಪಿಂಗ್ಗೆ ಸಂಪೂರ್ಣ ಫಿಟ್ ಇದ್ದಾರಾ? ಅಥವಾ ಇಲ್ಲವಾ? ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಅವರು ಯಾವುದೇ ಮಾದರಿಯಲ್ಲಿ ಮ್ಯಾಚ್ ವಿನ್ನರ್ ಆಗಿದ್ದಾರೆ. ಒಂದು ವೇಳೆ ನಾನೇದರೂ ಸೆಲೆಕ್ಟರ್ ಆಗಿದ್ದರೆ, ಮೊದಲು ಪಂತ್ಗೆ ಆದ್ಯತೆ ನೀಡುತ್ತಿದ್ದೆ,” ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಹೊತ್ತಿಗೆ ರಿಷಭ್ ಪಂತ್ ಸಂಪೂರ್ಣ ಫಿಟ್ ಆಗಿಲ್ಲವಾದರೆ, ಕೆ.ಎಲ್ ರಾಹುಲ್ ಅವರೇ ವಿಕೆಟ್ ಕೀಪರ್ ಆಗಲಿ ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ. ರಿಷಭ್ ಪಂತ್ ಅವರು ಗಾಯಕ್ಕೆ ತುತ್ತಾದ ಬಳಿಕ ಕೆಎಲ್ ರಾಹುಲ್ ಅವರು ಭಾರತದ ಮೂರೂ ಸ್ವರೂಪದಲ್ಲಿಯೂ ನಂ1 ವಿಕೆಟ್ ಕೀಪರ್ ಆಗಿದ್ದಾರೆ.