ಗದಗ: ಇಂದು ಪ್ಯಾನ್ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಇವರ ಬರ್ತ್ಡೇ ಅಭಿಮಾನಿಗಳು ಲೋಹದ ಕಟೌಟ್ ಹಾಕುವಾಗ ದುರಂತವೊಂದು ನಡೆದು ಹೋಗಿದೆ. ವಿದ್ಯುತ್ ವೈರ್ ತಗುಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ.
ಅದು ಈ ದಾರುಣ ಘಟನೆ ನಡೆದಿದ್ದು, ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಅನ್ನೋ ಗ್ರಾಮದಲ್ಲಿ. ಸೂರಣಗಿ ಗ್ರಾಮದ ಹನುಮಂತ ಹರಿಜನ್ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂಬ ಮೂವರು ಮೃತ ದುರ್ದೈವಿಗಳು. ಈ ಸುದ್ದಿ ತಿಳಿಯುತ್ತಿದ್ದಂತೆ ರಾಕಿಂಗ್ ಸ್ಟಾರ್ ಕೂಡ ವಿದೇಶದಿಂದ ಗದಗಕ್ಕೆ ಭೇಟಿ ನೀಡಿ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ನಟ ಯಶ್ ಜನ್ಮದಿನ ಆಚರಿಸಲು 25 ಅಡಿ ದೊಡ್ಡ ಲೋಹದ ಕಟೌಟ್ ನಿಲ್ಲಿಸಲು ಹೋಗಿ ಜೀವ ತೆತ್ತಿದ್ದಾರೆ. ಈ ಅತಿಯಾದ ಅಭಿಮಾನದ ಪರಾಕಾಷ್ಠೆ ಜೀವವನ್ನೇ ಬಲಿ ಪಡೆದಿದೆ.
ಮೂವರು ಯಶ್ ಅಭಿಮಾನಿಗಳು ಕೂಲಿ ಕಾರ್ಮಿಕರ ಮಕ್ಕಳು. ಹನುಮಂತಪ್ಪ ಹರಿಜನ್ಗೆ 21 ವರ್ಷ. ತಂದೆ ಮಜ್ಜೂರಪ್ಪ ಕೂಲಿ ಕಾರ್ಮಿಕ. ಇವರು ನಾಲ್ವರು ಮಕ್ಕಳು, ಜಮೀನು ಕೂಡ ಇಲ್ಲ.
ಮುರಳಿ ನಡುವಿನಮನಿ ಕೂಡ ಬಡವ. ಈತನಿಗೆ ಕೇವಲ 20 ವರ್ಷ. ತಂದೆ ನೀಲಪ್ಪ, ತಾಯಿ ಚನ್ನವ್ವ. ಇಬ್ಬರು ಕೂಲಿ ಮಾಡುವರು. ಮುರಳಿ ಒಬ್ಬನೇ ಮಗ.
ನವೀನ ಗಾಜಿ ಕೂಡ ಕೂಲಿ ಕೆಲಸ ಮಾಡುವರ ಮನೆ ಮಗ. ತಂದೆ ನೀಲಪ್ಪ, ತಾಯಿ ಮುತ್ತವ್ವ. ಇವರಿಗೆ 4 ಜನ ಮಕ್ಕಳು. ಕೂಲಿ ಮಾಡಿದ ದಿನ ಊಟ, ಇಲ್ಲದೆ ಹೋದರೆ ಉಪವಾಸ. ಮೂವರು ಮೃತರ ಮನೆ ಪರಿಸ್ಥಿತಿ ಕಿತ್ತು ತಿನ್ನುವಷ್ಟು ಬಡತನ ಎನ್ನಲಾಗಿದೆ.