ಮಂಡ್ಯ:- ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬಾಯಿಗೆ ಬೀಗ ಹಾಕಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಅಂಚೆ ಮೂಲಕ ಮನವಿ ರವಾನಿಸಿದರು.
ಜಿಲ್ಲಾ ಅಂಚೆ ಕಚೇರಿ ಎದುರು ಸೇರಿದ ಕಾರ್ಯಕರ್ತರು ಯತ್ನಾಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ‘ದುರ್ವರ್ತನೆ ತೋರುತ್ತಿರುವ ಅವರಿಗೆ ವರಿಷ್ಠರು ಬುದ್ಧಿ ಹೇಳಬೇಕು. ಆಗದಿದ್ದರೆ ಅವರನ್ನು ಸರಿ ದಾರಿಗೆ ತರಲು ನಮಗೇ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು. ‘ಲೋಕಸಭಾ ಚುನಾವಣೆ ವೇಳೆಗೆ ಯತ್ನಾಳ ಹೇಳಿಕೆಗಳು ಗಣನೆಗೆ ಬರುವುದರಿಂದ ಅದಕ್ಕೆ ಅವಕಾಶ ನೀಡಬಾರದು. ಪಕ್ಷದೊಳಗಿರುವವರೇ ಇರಿಸುಮುರಿಸಿನ ಹೇಳಿಕೆ ನೀಡಬಾರದು’ ಎಂದು ಒತ್ತಾಯಿಸಿದರು.