ಬೆಂಗಳೂರು:– ಉತ್ತರ ಕರ್ನಾಟಕದ ವಿಜಯಪುರ, ಬೀದರ್, ಧಾರವಾಡ, ಬಾಗಲಕೋಟೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ 14 ಡಿಗ್ರಿ ಸೆಲ್ಸಿಯಸ್ ಆಸುಪಾಸಿಯಲ್ಲಿದ್ದು, ಚಳಿಯ ಪ್ರಮಾಣ ಯಥಾರೀತಿ ಮುಂದುವರಿದಿದೆ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಮುಂದಿನ ಐದು ದಿನ ಮಳೆಯ ವಾತಾವರಣ ಇರುವುದಿಲ್ಲ. ಹಗಲಲ್ಲಿ ಓಣ ಹವೆಯ ವಾತಾವರಣ ಇರಲಿದ್ದು. ಬೆಳಗಿನ ಚಳಿಯಲ್ಲಿ ಏರಿಳಿತ ಇರಬಹುದು.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣವೇ ಮುಂದುವರಿದಿದೆ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲೇ ಸತತವಾಗಿ ಕಡಿಮೆ ತಾಪಮಾನ ದಾಖಲಾಗುತ್ತಿದೆ. ಮಂಗಳವಾರದಂದು ವಿಜಯಪುರದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶದ ಪ್ರಮಾಣ 10.9 ಡಿಗ್ರಿ ಸೆಲ್ಸಿಯಸ್. ಒಂದು ದಿನದಲ್ಲಿ ಸುಮಾರು 2.4 ಡಿಗ್ರಿ ಕುಸಿತ ಕಂಡಿದೆ. ಆದರೆ ವಿಜಯಪುರ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇದ್ದು, ಹಗಲು ವೇಳೆ ಒಣ ಹವೆ ವಾತಾವರಣವೇ ಅಧಿಕವಾಗಿದೆ.
ಬೀದರ್ನಲ್ಲೂ 12.5 ಡಿಗ್ರಿ, ಧಾರವಾಡದಲ್ಲಿ 13.8 ಡಿಗ್ರಿ. ಗದಗದಲ್ಲಿ 14.2 ಡಿಗ್ರಿ, ಹಾವೇರಿ ಹಾಗೂ ಬಾಗಲಕೋಟೆಯಲ್ಲಿ 14.4 ಡಿಗ್ರಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣ ಪ್ರದೇಶದಲ್ಲಿ 14.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡು ಬಂದಿತು.
ರಾಯಚೂರಿನಲ್ಲಿ 16 ಡಿಗ್ರಿ. ಕೊಪ್ಪಳದಲ್ಲಿ 16.8 ಡಿಗ್ರಿ, ಬೆಳಗಾವಿ ನಗರದಲ್ಲಿ 17 ಡಿಗ್ರಿ ಹಾಗೂ ಕಲಬುರಗಿಯಲ್ಲಿ 18.1 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಠ ಉಷ್ಣಾಂಶವು ದಾಖಲಾಗಿತ್ತು.
ದಕ್ಷಿಣ ಕರ್ನಾಟಕದ ಹಲವು ಕಡೆ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿತು. ಕೋಲಾರ ಭಾಗದ ಚಿಕ್ಕನಹಳ್ಳಿಯಲ್ಲಿ 12.6 ಡಿಗ್ರಿ ಹಾಗೂ ಚಿಂತಾಮಣಿಯಲ್ಲಿ ಅತಿ ಕಡಿಮೆ 13.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಚಾಮರಾಜನಗರದಲ್ಲಿ 14.1 ಡಿಗ್ರಿ. ಚಿಕ್ಕಮಗಳೂರು ಹಾಗೂ ದಾವಣಗೆರೆಯಲ್ಲಿ 14.2 ಡಿಗ್ರಿ, ಮಂಡ್ಯದಲ್ಲಿ 15.2 ಡಿಗ್ರಿ, ಶಿವಮೊಗ್ಗದಲ್ಲಿ 15.6 ಡಿಗ್ರಿ, ಹಾಸನದಲ್ಲಿ 15.6 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಠ ತಾಪಮಾನವು ಕಂಡು ಬಂದಿತು.
ಮೈಸೂರಲ್ಲಿ 16 ಡಿಗ್ರಿ,. ಚಿತ್ರದುರ್ಗದಲ್ಲಿ 17.2 ಡಿಗ್ರಿ. ಮಡಿಕೇರಿಯಲ್ಲಿ 18.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿತ್ತು.
ಎರಡು ಮೂರು ದಿನದಿಂದ ಕರಾವಳಿ ಭಾಗದಲ್ಲಿ ಇದ್ದ ಚಳಿಯ ಪ್ರಮಾಣ ಮಂಗಳವಾರ ಕಡಿಮೆಯಾಯಿತು, ಕಾರವಾರದಲ್ಲಿ ಕನಿಷ್ಠ ತಾಪಮಾನ 21.2 ಡಿಗ್ರಿ ಇದ್ದರೆ, ಹೊನ್ನಾವರದಲ್ಲಿ 23.1 ಡಿಗ್ರಿ, ಪಣಂಬೂರಿನಲ್ಲಿ 23.2 ಡಿಗ್ರಿ ಹಾಗೂ ಮಂಗಳೂರು ವಿಮಾನ ನಿಲ್ದಾಣ ಪ್ರದೇಶದಲ್ಲಿ 23.3 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿತ್ತು. ಕರ್ನಾಟಕದಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 30 ಡಿಗ್ರಿ ಆಸುಪಾಸಿನಲ್ಲಿದ್ದರೆ, ಕರಾವಳಿಯಲ್ಲಿ ಮಾತ್ರ ಅಧಿಕವಾಗಿತ್ತು. ಕಾರವಾರ ಹಾಗೂ ಹೊನ್ನಾವರ ಭಾಗದಲ್ಲಿ 36.5 ಡಿಗ್ರಿ ಸೆಲ್ಸಿಯಸ್ ಇದ್ದರೆ, ಮಂಗಳೂರು ಭಾಗದಲ್ಲಿ 35 ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತ ಕಂಡು ಬಂದಿತು.