ಧಾರವಾಡ: ಧಾರವಾಡ ಜಿಲ್ಲಾಡಳಿತದಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರು ಸಚಿವರಿಗೆ ಸುಮಾರು 177 ಅಹವಾಲುಗಳನ್ನು ಸಲ್ಲಿಸಿದರು. ಹೆಸ್ಕಾಂ 07, ಉದ್ಯೋಗ ಇಲಾಖೆ 03, ಸಹಕಾರಿ ಇಲಾಖೆ 03, ಸಾರಿಗೆ ಇಲಾಖೆ 03, ವಸತಿ ಇಲಾಖೆ 07, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 10,
ಕಾರ್ಮಿಕ ಇಲಾಖೆ 05, ಶಾಲಾ ಶಿಕ್ಷಣ ಇಲಾಖೆ 10, ಲೋಕೋಪಯೋಗಿ ಇಲಾಖೆ 02, ಸಮಾಜ ಕಲ್ಯಾಣ ಇಲಾಖೆ 03, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 03, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ 04, ಆರೋಗ್ಯ ಇಲಾಖೆ 03, ಕ್ರೀಡಾ ಇಲಾಖೆ 03, ಅಲ್ಪಸಂಖ್ಯಾತರ ಇಲಾಖೆ 01, ಗೃಹ ಇಲಾಖೆ 03, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ 02, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 03, ಮಹಾನಗರಪಾಲಿಕೆ 44, ನೋಂದಣಿ ಇಲಾಖೆ 01, ಕಂದಾಯ ಇಲಾಖೆ 54 ಸೇರಿದಂತೆ ಒಟ್ಟು 177 ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು.
iPhone 16 ಲೈನ್ಅಪ್ ಬಗ್ಗೆ ನಿಮಗೇನು ಗೊತ್ತು?: A18 ಚಿಪ್ ಯಾಕೆ ಹಾಕ್ತಾರೆ ಗೊತ್ತಾ?
ಈ 177 ಅಹವಾಲುಗಳಲ್ಲಿ ಅಣ್ಣಿಗೇರಿ 03, ಧಾರವಾಡ 86, ಹುಬ್ಬಳ್ಳಿ ನಗರ 33, ಹುಬ್ಬಳ್ಳಿ ಗ್ರಾಮೀಣ 16, ಅಳ್ನಾವರ 02, ಕಲಘಟಗಿ 16, ಕುಂದಗೋಳ 08 ಮತ್ತು ನವಲಗುಂದದಿಂದ 13 ಅಹವಾಲುಗಳು ಸಲ್ಲಿಕೆಯಾಗಿವೆ. ಇದಕ್ಕೂ ಮುಂಚೆ ಮಾತನಾಡಿದ ಸಚಿವ ಲಾಡ್, ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು, ಸರ್ಕಾರದ ಹಂತದಲ್ಲಿ ಪರಿಹರಿಸಬೇಕಾದ ಮತ್ತು ಕೋರ್ಟ್, ಪಾಲಸಿ ಸಂಬಂಧಿ ಅಹವಾಲು ಹೊರತುಪಡಿಸಿ ಬಹುತೇಕ ಅಹವಾಲುಗಳನ್ನು ಸ್ಥಳೀಯವಾಗಿ ಪರಿಹರಿಸಲಾಗಿದೆ. ಬರುವ ಜನೆವರಿಯಿಂದ ಸಾರ್ವಜನಿಕರ ಅನಕೂಲಕ್ಕಾಗಿ ತಾಲೂಕು ಹಂತದಲ್ಲೂ ಜನತಾ ದರ್ಶನ ಆಯೋಜಿಸಲಾಗುವುದು ಎಂದರು.
ಮುಂದಿನ ಆರು ತಿಂಗಳು ಕುಡಿಯುವ ನೀರು, ಮೇವು, ಉದ್ಯೋಗ ಸಮಸ್ಯೆ ಬರಬಹುದು. ಇದಕ್ಕೆ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹೊಸ ಬೋರ್ವೆಲ್ ಕೊರೆಸಲು ಕ್ರಮ ವಹಿಸಬೇಕು. ಕುಡಿಯುವ ನೀರು ಸಮಸ್ಯೆ ಇರುವ ಸಂಭವನೀಯ ಪ್ರದೇಶ ಗುರುತಿಸಿ, ಅಲ್ಲಿ ಖಾಸಗಿ ಬೋರ್ವೆಲ್ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆಯಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪ ಪೊಲೀಸ್ ಆಯುಕ್ತ ರಾಜೀವ ಎಂ., ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಜಿಲ್ಲಾ ಹಂತದ ಎಲ್ಲ ಅಧಿಕಾರಿಗಳು ಪಾಲ್ಗೊಂಡಿದ್ದರು.