ಬೆಂಗಳೂರು:- ಜಯ ಕರ್ನಾಟಕ ಜನಪರ ವೇದಿಕೆ ಮುಖ್ಯಸ್ಥ ಗುಣರಂಜನ್ ಶೆಟ್ಟಿ ಅವರು ಡಬ್ಲ್ಯು ಎಫ್ಐನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಒಂದು ವರ್ಷದ ಹಿಂದಷ್ಟೇ ರಾಜ್ಯಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಗುಣರಂಜನ್, ಖ್ಯಾತ ಸಿನೆಮಾ ನಟಿ ಅನುಷ್ಕಾ ಶೆಟ್ಟಿಯ ಸಹೋದರ ಎನ್ನುವುದು ಗಮನಾರ್ಹ. ಇವರು ಸಂಜಯ್ ಸಿಂಗ್ ತಂಡದಿಂದ ಈ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಗುಣರಂಜನ್ ಅವರ ಹೆತ್ತವರು ಮೂಲತಃ ಪುತ್ತೂರಿನವರು, ಇವರು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಕಳೆದ ಹಲವು ವರ್ಷಗಳಿಂದ ಜಯ ಕರ್ನಾಟಕ ಜನಪರ ವೇದಿಕೆಯ ಮೂಲಕ ಹಲವು ಜನಪರ ಚಟುವಟಿಕೆ ನಡೆಸಿದ್ದಾರೆ. ಅದಕ್ಕೂ ಮುನ್ನ ಮುತ್ತಪ್ಪ ರೈ ಅವರ ಜಯ ಕರ್ನಾಟಕದಲ್ಲೂ ಕೆಲಸ ಮಾಡಿದ್ದರು. ಇವರು ಜಂಟಿ ಕಾರ್ಯದರ್ಶಿ ಯಾಗಿರುವುದರಿಂದ ರಾಜ್ಯದಲ್ಲಿ ಕುಸ್ತಿ ಬೆಳವಣಿಗೆಯಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
ಕುಸ್ತಿಪಟುಗಳಿಗೆ ಅನುಕೂಲವಾಗಲಿದೆ
ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದನ್ನು ವಿನೀತನಾಗಿ ಸ್ವೀಕರಿಸುತ್ತೇನೆ. ಈ ಚುನಾವಣೆಯಿಂದ ಕುಸ್ತಿಪಟುಗಳಿಗೆ ಬಹಳ ಅನುಕೂಲವಾಗಲಿದೆ. 11 ತಿಂಗಳಿಂದ ಕುಸ್ತಿ ಚಟುವಟಿಕೆಗಳು ನಿಂತುಹೋಗಿದ್ದವು, ಅವೆಲ್ಲ ಪುನಾರಂಭವಾಗಲಿವೆ. ಬೃಜ್ ಭೂಷಣ್ ಡಬ್ಲ್ಯುಎಫ್ಐಗಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಅವರ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನುವುದಕ್ಕಿಂತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆದಿರುವ ಆಯ್ಕೆಯನ್ನು ನಾವು ಸ್ವೀಕರಿಸಬೇಕಾಗುತ್ತದೆ.