ಚಿತ್ರದುರ್ಗ:- ಭ್ರಷ್ಟ ವ್ಯವಸ್ಥೆಯಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜಕಾರಣದಿಂದ ದೂರ ಉಳಿಯುವ ಬಗ್ಗೆ ಆಲೋಚಿಸಿದ್ದೇನೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ ಎಂದರು.
ಭ್ರಷಾಚಾರದ ಕುರ್ಚಿಯ ಪಕ್ಕದಲ್ಲಿಯೂ ಕುಳಿತುಕೊಳ್ಳಲು ಇಷ್ಟ ಪಡುವುದಿಲ್ಲ. ರಾಜಕಾರಣದಲ್ಲಿರುವ ಭ್ರಷ್ಟಾಚಾರ ಕಣ್ಣಿಗೆ ಬಿದ್ದಾಗಲೇ ಈ ನಿರ್ಧಾರ ಕೈಗೊಂಡಿದ್ದೇನೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಲ್ಲ. ಭವಿಷ್ಯದ ರಾಜಕಾರಣದಿಂದಲೇ ಹೊರಗುಳಿಯುವೆ’ ಎಂದು ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
‘ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷದ ನಿಷ್ಠಾವಂತ ಸೇನಾನಿಯಾಗಿದ್ದು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಅಪೇಕ್ಷೆ. ನಾನೇ ಅಭ್ಯರ್ಥಿಯಾಗಬೇಕು, ನನ್ನ ಮಕ್ಕಳು ರಾಜಕಾರಣಕ್ಕೆ ಬರಬೇಕು ಎಂಬ ಬಯಕೆ ನನಗಿಲ್ಲ. ಪಕ್ಷದ ಸೂಚನೆಯ ಮೇರೆಗೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಪಕ್ಷ ಗುರುತಿಸಿ ಮಂತ್ರಿ ಮಾಡಿದೆ, ಅಷ್ಟು ಸಾಕು’ ಎಂದು ಹೇಳಿದರು.
‘ದೂರದಿಂದ ಚಿತ್ರದುರ್ಗಕ್ಕೆ ಬಂದಿದ್ದ ನನ್ನನ್ನು ಮತದಾರರು ಲೋಕಸಭೆಗೆ ಆಯ್ಕೆ ಮಾಡಿದರು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬ ಕೊರಗು ಇದೆ. ಮುಂಬರುವ ಚುನಾವಣೆಯಲ್ಲಿ ಸ್ಥಳೀಯರಿಗೆ ಅವಕಾಶ ಸಿಕ್ಕರೆ ನಾನು ಸ್ವಾಗತಿಸುತ್ತೇನೆ. ಆಂತರಿಕ ಸಮೀಕ್ಷೆ ಆಧರಿಸಿ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕೆ ನಾನು ಬದ್ಧನಾಗಿರುತ್ತೇನೆ’ ಎಂದರು.