ಬಾಗಲಕೋಟ:- ಸಂಸತ್ ಮೇಲಿನ ಸ್ಮೋಕ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಆರೋಪಿ ಮನೋರಂಜನ್ ನಂಟು ಬಾಗಲಕೋಟೆಗೂ ವ್ಯಾಪಿಸಿದೆ.
ಇದೀಗ ಆರೋಪಿ ಮನೋರಂಜನ್ ಸಹಪಾಠಿ ನಗರದ ಸಾಯಿಕೃಷ್ಣ ಜಗಲಿಯನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಿಲ್ಲಿಯ ನಾಲ್ವರು ಅಧಿಕಾರಿಗಳ ತಂಡ 30 ವರ್ಷದ ಸಾಯಿಕೃಷ್ಣರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನವ ನಗರ ಪೊಲೀಸ್ ಠಾಣೆಯಲ್ಲಿ ನಿರಂತರ ಎರಡು ಗಂಟೆ ವಿಚಾರಣೆ ನಡೆಸಿದ ಪೊಲೀಸರು ಮನೋರಂಜನ್ ಜತೆಗಿನ ಸ್ನೇಹ, ವಿಚಾರಧಾರೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಂತರ ಪೊಲೀಸ್ ಜೀಪ್ನಲ್ಲಿ ಸಾಯಿಕೃಷ್ಣ ಕರೆದೊಯ್ದರು. ಅವರನ್ನು ಹೆಚ್ಚಿನ ವಿಚಾರಣೆಗಾಗಿ ಹೊಸದಿಲ್ಲಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಬಿಐಟಿ ಎಂಜಿನಿಯರಿಂಗ್ ಕಾಲೇಜ್ನಲ್ಲಿ 2008ರಲ್ಲಿ ಮನೋರಂಜನ್ ಹಾಗೂ ಸಾಯಿಕೃಷ್ಣ ಒಟ್ಟಿಗೆ ಓದಿದ್ದರು. ಇಬ್ಬರೂ ಸ್ನೇಹಿತರಾಗಿದ್ದು, ಈಗಲೂ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಮನೋರಂಜನ್ ವಿಚಾರಣೆ ಸಂದರ್ಭದಲ್ಲಿ ಡೈರಿಯಲ್ಲಿ ದೊರೆತ ಮಾಹಿತಿ ಆಧರಿಸಿ ದಿಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಸಾಯಿಕೃಷ್ಣ ಕಾರ್ಯನಿರ್ವಹಿಸುತ್ತಿದ್ದಾರೆ.
ನಿವೃತ್ತ ಡಿಎಸ್ಪಿ ವಿಠ್ಠಲ ಜಗಲಿಯವರ ಪುತ್ರನಾಗಿರುವ ಸಾಯಿಕೃಷ್ಣ ಸೌಮ್ಯ ಸ್ವಭಾವದ ಯುವಕ ಎಂದು ಹೇಳಲಾಗಿದೆ. ವಿದ್ಯಾಗಿರಿಯ 11ನೇ ಕ್ರಾಸ್ನಲ್ಲಿ ಮನೆಯಿದ್ದು,ತಂದೆ ವಿಠ್ಠಲ ಅವರು ವಿವಾಹ ಸಮಾರಂಭದಲ್ಲಿ ಸಿಂಧನೂರಿಗೆ ತೆರಳಿದ್ದಾರೆ. ಮನೆಗೆ ಆಗಮಿಸಿದ ಪೊಲೀಸರು ಯುವಕನನ್ನು ವಿಚಾರಣೆಗಾಗಿ ಕರೆದುಕೊಂಡು ತೆರಳಿದರು. ಸಾಯಿಕೃಷ್ಣ ಅವರ ಫೇಸ್ಬುಕ್ ಪ್ರೊಫೈಲ್ ಡಿಲೀಟ್ ಆಗಿದ್ದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ರೂಂ ಮೇಟ್ ಎಂದು ಮಾಹಿತಿ ಪಡೆದಿದ್ದಾರೆ. ಆತ ಮುಗ್ಧನಾಗಿದ್ದಾನೆ, ಯಾವುದೇ ಅಪರಾಧ ಮಾಡಿಲ್ಲ. ಇದು ಸುಳ್ಳು, ರೂಂಮೇಟ್ ಎನ್ನುವ ಕಾರಣಕ್ಕೆ ವಿಚಾರಣೆ ನಡೆಸಿದ್ದಾರೆ, ಮನೋರಂಜನ್ ಪ್ರಕರಣ ಕ್ಕೂ ಈತನಿಗೆ ಸಂಬಂಧವಿಲ್ಲ” ಎಂದು ಸಹೋದರರು ಹೇಳಿದ್ದಾರೆ.