ಬೆಂಗಳೂರು: ಪಾಪಿ ತಾಯಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಒಂದು ವರ್ಷ ಮೂರು ತಿಂಗಳ ಮಗುವನ್ನೇ ನದಿಗೆ ಎಸೆದು ಕೊಲೆ ಮಾಡಿದ್ದಾಳೆ.
ಈ ಘಟನೆ ನಡೆದಿರುವುದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಾಣಗಳ್ಳಿ ಗ್ರಾಮದ ಬಳಿ. ಭಾಗ್ಯಮ್ಮ (21) ಎಂಬಾಕೆ ಚನ್ನಪಟ್ಟಣ ಹಾದು ಹೋಗುವ ಕಣ್ವ ನದಿಗೆ ತನ್ನ ಮಗುವನ್ನು ಎಸೆದಿದ್ದಾಳೆ.
ಭಾಗ್ಯಮ್ಮ ಎಂಬಾಕೆ ಎರಡು ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ, ಸಂಸಾರ ನೆಟ್ಟಗೆ ಮಾಡದ ಆಕೆ ಗಂಡನನ್ನು ಬಿಟ್ಟು ತವರು ಮನೆ ಸೇರಿಕೊಂಡಿದ್ದಳು. ಆದರೆ, ಅಷ್ಟು ಹೊತ್ತಿಗೆ ಒಂದು ಮಗು ಹುಟ್ಟಿತ್ತು. ದೇವರಾಜ್ ಈಗ ಒಂದು ವರ್ಷ ಮೂರು ತಿಂಗಳ ಮಗು.
ಮಂಗಳವಾರ ರಾತ್ರಿ 7.30ರ ಹೊತ್ತಿಗೆ ಭಾಗ್ಯಮ್ಮ ಬಟ್ಟೆ ತೊಳೆಯುವ ನೆಪದಲ್ಲಿ ಕಾಲಿಕೆರೆಯ ಕಣ್ವ ನದಿ ತೀರಕ್ಕೆ ಬಂದಿದ್ದಳು. ಅಲ್ಲಿ ಮಗುವನ್ನು ನದಿಗೆ ಎಸೆದು ಅಲ್ಲಿಂದ ಕಾಲಿಕೆರೆ ದೇವಸ್ಥಾನದ ಬಳಿಗೆ ಓಡಿ ಬಂದು ಗೋಳಾಡಲು ಶುರು ಮಾಡುತ್ತಾಳೆ. ಮಗು ನೀರಿಗೆ ಬಿತ್ತು ಎಂದೆಲ್ಲ ಹೇಳುತ್ತಾಳೆ. ಅಲ್ಲಿನ ಜನರು ಕೂಡಲೇ ಓಡಿ ಹೋಗಿ ಮಗುವನ್ನು ಹುಡುಕುತ್ತಾರೆ. ಆದರೆ, ಮುಳುಗಿದ ಮಗು ಸಿಕ್ಕಿರಲಿಲ್ಲ. ಬುಧವಾರ ಮುಂಜಾನೆಯಷ್ಟೇ ಅದು ಸಿಕ್ಕಿದೆ.