ರಾಯಚೂರು:- ಬರ ಪರಿಹಾರದ ವಿಚಾರವಾಗಿ ಕೇಂದ್ರದ ಮೇಲೆ ಕಾಂಗ್ರೆಸ್ನಿಂದ ಗೂಬೆಕೂರಿಸುವ ಕೆಲಸ ನಡೆಯುತ್ತಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾರಿ, ತೀವ್ರ ಬರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕಾಂಗ್ರೆಸ್ ರಾಜಕೀಯ ಮಾಡುವುದನ್ನು ಬಿಟ್ಟು ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಬರ ಪರಿಹಾರದ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಆವರಿಸಿರುವ ತೀವ್ರ ಬರದ ಸಮಗ್ರ ಅಧ್ಯಯನ ನಡೆಸಿಲ್ಲ. ಸಚಿವರು, ಜಿಲ್ಲಾ ಉಸ್ತುವಾರಿಗಳು ಹಾಗೂ ಶಾಸಕರು ರೈತರ ಸಮಸ್ಯೆಗಳನ್ನು ಅರಿತುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಬರ ನಿರ್ವಹಣೆಗೆ ಅಗತ್ಯವಾದ ಅನುದಾನ ಜಿಲ್ಲಾಡಳಿತಗಳ ಬಳಿ ಇಲ್ಲದಂತಾಗಿದೆ. ಇರುವ ಅಲ್ಪ ಮೊತ್ತದಿಂದ ಕುಡಿಯುವ ನೀರು, ರೈತರಿಗೆ ಕಾಮಗಾರಿ, ಜಾನುವಾರುಗಳಿಗೆ ಮೇವು ಸಂಗ್ರಹ ಸಾಧ್ಯವಾಗಲಿದ್ದು, ಬರ ಪರಿಹಾರಕ್ಕೆ ಹಣವೇ ಇಲ್ಲದಂತಾಗಿದೆ ಎಂದರು. ಆಡಳಿತಕ್ಕೆ ಬಂದು ಆರು ತಿಂಗಳು ಗತಿಸುತ್ತಿದ್ದರು ಶಾಸಕರಿಗೆ ಸರಿಯಾದ ರೀತಿಯಲ್ಲಿ ಅನುದಾನ ಹಂಚಿಕೆ ಮಾಡಿಲ್ಲ, ಶಾಸಕರ ವಿವೇಚನಾ ನಿಧಿಗೆ 2 ಕೋಟಿ ರು. ನೀಡಬೇಕು ಆದರೆ ಕೇವಲ 50 ಲಕ್ಷ ರು. ನೀಡಲು ಸರ್ಕಾರ ಮುಂದಾಗಿದೆ.
ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳಿಗೆ ಅನುದಾನ ಹೊಂದಿಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭವು ಸಹ ತಲುಪುತ್ತಿಲ್ಲ, ಬರೀ ಘೋಷಣೆಗಳನ್ನು ಮಾಡಿದರೆ ಸಾಲದು ಅದನ್ನು ಜಾರಿಗೊಳಬೇಕು, ಜನಸಾಮಾನ್ಯರ ನಿರೀಕ್ಷೆಗಳಿಗೆ ತಕ್ಕಂತೆ ಸರ್ಕಾರವು ಆಡಳಿತ ನಡೆಸಬೇಕು ಎಂದು ಒತ್ತಾಯಿಸಿದರು. ಕೊರೋನಾ ಮತ್ತೆ ಆರಂಭಗೊಂಡಿದ್ದು ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು, ಬರ ನಿರ್ವಹಣೆ ಹೇಗ ಮಾಡಬೇಕು ಮತ್ತು ಕೇಂದ್ರದಿಂದ ಆರ್ಥಿಕ ನೆರವಿನ ಅಗತ್ಯ ಸೇರಿ ಇತರೆ ಅಂಶಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಕೂಡಲೇ ಸರ್ವ ಪಕ್ಷಗಳ ಸಭೆಯನ್ನು ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದರು.