2023ರ ವರ್ಷವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಮತ್ತು ಪ್ರತಿಯೊಬ್ಬರೂ 2024 ರ ವರ್ಷವನ್ನು ಉತ್ಸಾಹದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಈ ವರ್ಷದ ಭಾರತದಲ್ಲಿ ನಡೆದ ಪ್ರಮುಖ ಘಟನೆಗಳತ್ತ ಕಣ್ಣು ಹಾಯಿಸಿದರೆ ಸಾಕಷ್ಟು ಸಂಗತಿಗಳು ಕಾಣಿಸುತ್ತವೆ. ಇವುಗಳಲ್ಲಿ ದುರಂತವೇ ಹೆಚ್ಚು. ಆದರೆ ನಾವು ಪ್ರಮುಖ 10 ಪ್ರಮುಖ ಘಟನೆ ಬಗ್ಗೆ ಹೇಳುತ್ತೇವೆ ಕೇಳಿ!
ಚಂದ್ರಯಾನ-3ರ ಯಶಸ್ಸು
ಬಾಹ್ಯಾಕಾಶ ಲೋಕದಲ್ಲಿನ ಭಾರತದ ಸಾಧನೆ ಇಡೀ ಜಗತ್ತಿನ ಮೆಚ್ಚುಗೆಗೆ ವ್ಯಕ್ತವಾದ ವರ್ಷವಿದು. ಜುಲೈ 14ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಚಂದ್ರಯಾನ-3 ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿತ್ತು. ಈ ಮೂಲಕ ಚಂದ್ರನ ಮೇಲೆ ನೌಕೆ ಇಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು
ಒಡಿಶಾ ರೈಲು ಅಪಘಾತ
ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲುಗಳ ಅಪಘಾತ, ಇತ್ತೀಚಿನ ವರ್ಷಗಳಲ್ಲಿಯೇ ದೇಶ ಕಂಡ ಘೋರ ರೈಲು ದುರಂತವಾಗುತ್ತು. ಮೂರು ರೈಲುಗಳು ಇಲ್ಲಿ ಡಿಕ್ಕಿಯಾಗಿ ಭೀಕರ ದುರಂತ ಸಂಭವಿಸಿತ್ತು. ಪಶ್ಚಿಮ ಬಂಗಾಳದ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ಎಕ್ಸ್ಪ್ರಸ್ ರೈಲು, ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ 21 ಬೋಗಿಗಳು ಹಳಿ ತಪ್ಪಿದ್ದವು.
ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಹತ್ಯೆ
ಸಮಾಜವಾದಿ ಪಕ್ಷದ ಮಾಜಿ ಸಂಸದ ಹಾಗೂ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ನನ್ನು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿತ್ತು. ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ ಅತೀಕ್ ಅಹ್ಮದ್ನ ಮಗ ಅಸಾದ್ನನ್ನು ಉತ್ತರ ಪ್ರದೇಶ ಪೊಲೀಸರು ಝಾನ್ಸಿಯಲ್ಲಿ ಏಪ್ರಿಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದರು.
ಉತ್ತರಾಖಂಡ ಸುರಂಗ ಕುಸಿತ
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 134ಕ್ಕೆ ಸಂಪರ್ಕಿಸುವ ಸಿಲ್ಕ್ಯಾರಾ ಸುರಂಗ ನಿರ್ಮಾಣ ಕಾರ್ಯದ ವೇಳೆ ನ. 12ರಂದು ಸುರಂಗ ಕುಸಿದು 41 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದರು. ಬೆಳಗಿನ ಜಾವ 5.30ಕ್ಕೆ ಈ ಘಟನೆ ನಡೆದಿತ್ತು
ಕಾಶ್ಮೀರದಲ್ಲಿ ಕನ್ನಡಿಗನ ಎನ್ಕೌಂಟರ್
ಪಂಜಾಬ್ನ ಸೇನಾ ನೆಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಬಲಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನವೆಂಬರ್ನಲ್ಲಿ ನಡೆದ ಬೃಹತ್ ಎನ್ಕೌಂಟರ್ನಲ್ಲಿ ಕರ್ನಾಟಕದ ಕ್ಯಾಪ್ಟನ್ ಪ್ರಾಂಜಲ್ ಸೇರಿ ಒಟ್ಟು ಐವರು ಹುತಾತ್ಮರಾಗಿದ್ದರು. ಅದೇ ರೀತಿ ವಿವಿಧ ಎನ್ಕೌಂಟರ್ಗಳಲ್ಲಿ ಸೇನಾ ಪಡೆಗಳು ಹಲವಾರು ಉಗ್ರರನ್ನು ಸಂಹಾರ ಮಾಡಿವೆ.
ಮಣಿಪುರ ಮತ್ತು ಹರ್ಯಾಣ ಹಿಂಸಾಚಾರ
ದೇಶವನ್ನು ಮಾತ್ರವಲ್ಲದೆ, ಜಗತ್ತಿನ ಗಮನ ಸೆಳೆದ ಮಣಿಪುರ ಹಿಂಸಾಚಾರ ಭಾರತಕ್ಕೆ ಈ ವರ್ಷ ತೀವ್ರ ಮುಜುಗರ ಉಂಟುಮಾಡಿದ ಘಟನೆ. ಮಣಿಪುರದ ಕುಕಿ ಹಾಗೂ ಮೈತೇಯಿ ಬುಡಕಟ್ಟು ಸಂಘಟನೆಗಳ ನಡುವಿನ ಜನಾಂಗೀಯ ಸಂಘರ್ಷವು ಹಲವು ತಿಂಗಳವರೆಗೆ, ನಿರಂತರವಾಗಿ ಹಾಗೂ ಭಯಾನಕ ಸ್ವರೂಪದಲ್ಲಿ ಹಿಂಸಾಚಾರ ನಡೆದಿತ್ತು
ಆದಿತ್ಯ ಉಡಾವಣೆ
ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಭಾರತ ಬಾಹ್ಯಾಕಾಶ ರಂಗದಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಟಿಸಿತು. ಅದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್1 ನೌಕೆಯ ಉಡಾವಣೆ. ಸೆಪ್ಟೆಂಬರ್ 2ರಂದು ದೇಶದ ಮೊದಲ ಸೌರ ಅಧ್ಯಯನ ನೌಕೆಯನ್ನು ಚಿಮ್ಮಿಸಲಾಯಿತು.
ಸಿಕ್ಕಿಂ ರಾಜ್ಯದಲ್ಲಿ ದಿಢೀರ್ ಪ್ರವಾಹ
ಸಿಕ್ಕಿಂ ರಾಜ್ಯದಲ್ಲಿ ಮೇಘ ಸ್ಫೋಟದ ಬಳಿಕ ಉಂಟಾದ ದಿಢೀರ್ ಪ್ರವಾಹದಿಂದ ಕನಿಷ್ಠ 74 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು. ಅಕ್ಟೋಬರ್ 4ರಂದು ಭಾರಿ ಮಳೆಯಿಂದ ಪ್ರವಾಹ ಉಂಟಾಗಿತ್ತು. ಇದರಿಂದ ಲ್ಹೋನಕ್ ಸರೋವರ ಒಡೆದಿತ್ತು. ತೀಸ್ತಾ ಅಣೆಕಟ್ಟೆಯ ಗೇಟ್ಗಳನ್ನು ತೆರೆಯುವ ಮುನ್ನವೇ ನೀರು ನುಗ್ಗಿದ್ದರಿಂದ ಕ್ಷಣ ಮಾತ್ರದಲ್ಲಿ ಅಣೆಕಟ್ಟು ಒಡೆದಿತ್ತು.
ಇಂದೋರ್ ಬಾವಿ ಕುಸಿತ ದುರಂತ
ಮಧ್ಯಪ್ರದೇಶದ ಇಂದೋರ್ನಲ್ಲಿ ದೇವಸ್ಥಾನವೊಂದರ ಪುರಾತನ ಮೆಟ್ಟಿಲು ಬಾವಿ ಕುಸಿದು 36 ಮಂದಿ ಬಲಿಯಾಗಿದ್ದರು. ಮಾರ್ಚ್ 30ರ ರಾಮನವಮಿ ಸಂದರ್ಭದಲ್ಲಿ ನಡೆದಿದ್ದ ಈ ಘಟನೆ ತಲ್ಲಣ ಮೂಡಿಸಿತ್ತು. ಬಾಳೇಶ್ವರ ಮಹಾದೇವ ದೇವಸ್ಥಾನದಲ್ಲಿ ರಾತ್ರಿ ರಾಮ ನವಮಿ ಆಚರಣೆಗೆಂದು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆಗ ಅತಿಯಾದ ತೂಕದಿಂದಾಗಿ ಗ್ರಿಲ್ ಮತ್ತು ಟೈಲ್ಸ್ ಕುಸಿದು 40 ಅಡಿ ಆಳದ ಬಾವಿಗೆ ಭಕ್ತರು ಬಿದ್ದಿದ್ದರು.
ಖಲಿಸ್ತಾನ್ ಉಗ್ರ ಅಮೃತಪಾಲ್ ಸಿಂಗ್ ಬಂಧನ
ವಾರಿಸ್ ಪಂಜಾಬ್ ದೆ’ ಸಂಘಟನೆ ಮೂಲಕ ಖಲಿಸ್ತಾನ್ ಚಟುವಟಿಕೆಗಳನ್ನು ನಡೆಸುತ್ತಿದ್ದ ಮತ್ತು ಅಮಿತ್ ಶಾ ಸೇರಿದಂತೆ ಅನೇಕರಿಗೆ ಬೆದರಿಕೆ ಹಾಕಿದ್ದ ಅಮೃತಪಾಲ್ ಸಿಂಗ್ ಬಂಧನ ರೋಚಕ ಸಿನಿಮಾದಂತಿತ್ತು. ಪಂಜಾಬ್ ಪೊಲೀಸರು ಆತನ ಬಂಧನಕ್ಕೆ ಬೃಹತ್ ಕಾರ್ಯಾಚರಣೆ ನಡೆಸಿದ್ದರೂ, ಆತ ಅವರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡಿದ್ದ. ಈತನ ವಿರುದ್ಧದ ಕಾರ್ಯಾಚರಣೆಗೆ ನಾಂದಿ ಹಾಡಿದ್ದು, ಫೆಬ್ರವರಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆದಿದ್ದ ದಾಳಿ