ನಗರಸಭೆಯಿಂದ ಪಾಲಿಕೆಯಾಗಿ ಮೇಲ್ದರ್ಜೆಗೆ ಬಡ್ತಿ ಪಡೆದರೂ ಈವರೆಗೂ ಹೊಸದಾಗಿ ಮಂಜೂರು ಮಾಡಿದ ಹುದ್ದೆಗಳಿಗೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಿಯೇ ಇಲ್ಲ. ಇದರಿಂದ ಶೇ.50ರಿಂದ 60ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಇರುವವರೇ ಹೆಚ್ಚುವರಿ ಕಾರ್ಯ ನಿರತರಾಗಿದ್ದಾರೆ. ಒಟ್ಟು ಜನಸಂಖ್ಯೆ ಆಧರಿಸಿ ಮಹಾನಗರ ಪಾಲಿಕೆಗೆ ಹೊಸ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಒಟ್ಟು 39 ವಾರ್ಡ್ ಹೊಂದಿರುವ ಮಹಾನಗರ ಪಾಲಿಕೆಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಎ, ಬಿ, ಸಿ ಮತ್ತು ಡಿ ಗ್ರೂಪ್ಗಳಿಗೆ ಮಂಜೂರು ಪಡೆದ ಹುದ್ದೆಗಳ ಪೈಕಿ ಭರ್ತಿಯಾಗದೆ ಹಾಗೇ ಉಳಿದಿವೆ. ಇದರಿಂದಾಗಿ ಪ್ರಸ್ತುತ ಕೆಲಸ ಮಾಡುತ್ತಿರುವವರ ಮೇಲೆ ಹೊರೆ ಹೆಚ್ಚಾಗುತ್ತಿದೆ.
1379 ಹುದ್ದೆಗಳು ಖಾಲಿ
ಪಾಲಿಕೆಯೂ 2004ರಿಂದ ಆರಂಭಗೊಂಡಿದ್ದು, ಒಟ್ಟು 1800 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 421 ಹುದ್ದೆ ಭರ್ತಿ ಮಾಡಿಕೊಳ್ಳಲಾಗಿದೆ. ಉಳಿದಂತೆ 693 ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1379 ಹುದ್ದೆಗಳು ಖಾಲಿ ಇದೆ ಎಂದು ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ.
ಎ ಗ್ರೂಪ್ನಲ್ಲಿ ಉಪ ಆಯಕ್ತರು (ಆಡಳಿತ), ಉಪ ಆಯುಕ್ತರು (ಅಭಿವೃದ್ಧಿ), ಉಪ ಆಯುಕ್ತರು (ಕಂದಾಯ), ಮುಖ್ಯ ಲೆಕ್ಕಾಧಿಕಾರಿ, ಕಾರ್ಯಪಾಲಕ ಅಭಿಯಂತರರು, ಕಾನೂನು ಅಧಿಕಾರಿ, ತಾಂತ್ರಿಕ ಸಹಾಯಕರು, ವಲಯ ಆಯುಕ್ತರು, ಹೀಗೆ ಖಾಲಿ ಹುದ್ದೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎ ಗ್ರೂಪ್ನಲ್ಲಿ 18, ಬಿ ಗ್ರೂಪ್ನಲ್ಲಿ 19, ಸಿ ಗ್ರೂಪ್ನಲ್ಲಿ 459 ಹಾಗೂ ಡಿ ಗ್ರೂಪ್ನಲ್ಲಿ 883 ಹುದ್ದೆಗಳು ಖಾಲಿ ಇವೆ.
ಕಾರ್ಯ ಒತ್ತಡ ಜೋರು
ಕೆಳಹಂತದ ಹುದ್ದೆಗಳು ಖಾಲಿ ಇರುವುದರಿಂದ ಹೆಚ್ಚುವರಿ ಒತ್ತಡ ನೀಡಲಾಗುತ್ತಿದೆ. ಎಂಜಿನಿಯರ್ಗಳು ಸಿವಿಲ್ ಕಾಮಗಾರಿ ಜತೆಗೆ ಕಂದಾಯ ವಿಭಾಗದಲ್ಲೂ ಕೆಲಸ ಮಾಡಬೇಕು. ಎಲೆಕ್ಟ್ರಿಕಲ್ ಎಂಜಿನಿಯರ್ ಪರಿಸರ ಸಂಬಂಧಿ ಚಟುವಟಿಕೆಗಳ ಮೇಲುಸ್ತುವಾರಿ ಮಾಡಬೇಕು. ವಲಯ ಆಯುಕ್ತ ಹುದ್ದೆಗಳೂ ಖಾಲಿ ಬಿದ್ದಿರುವುದರಿಂದ ಇನ್ನೊಂದು ವಿಭಾಗದವರು ನೋಡಬೇಕು.
ಕೆಲವರಿಗಂತೂ ನಾಲ್ಕೈದು ವಿಭಾಗಗಳ ಉಸ್ತುವಾರಿ ವಹಿಸಿರುವುದರಿಂದ ಅನಿವಾರ್ಯ ಕೆಲಸ ಮಾಡುವ ಸ್ಥಿತಿಯಿದೆ. ಎರಡು ದಿನಕ್ಕೆ ಒಂದು ವಿಭಾಗ, ಮತ್ತೆರಡು ದಿನ ಮತ್ತೊಂದು ವಿಭಾಗವನ್ನು ವಿಚಾರಿಸುವಂಥ ಅಧಿಕಾರಿಗಳೂ ಪಾಲಿಕೆಯಲ್ಲಿ ಇದ್ದಾರೆ. ಮೇಲಾಧಿಕಾರಿಗಳ ಮಾತಿಗೆ ಮರು ಮಾತನಾಡದೆ ಬಹುತೇಕರು ಕೆಲಸ ಮಾಡುವಂತಾಗಿದೆ.
ಅಭಿವೃದ್ಧಿ ಕುಂಠಿತ
ನಗರ ಪಾಲಿಕೆಯ ಕೆಳಹಂತದ ಹುದ್ದೆಗಳು ಹೆಚ್ಚಾಗಿ ಖಾಲಿ ಇರುವುದರಿಂದ ಯಾವುದೇ ಕಾಮಗಾರಿಗಳ ಬಿಲ್ ಮುಂದೆ ಹೋಗಲ್ಲ. ಅಟೆಂಡರ್, ಕಂಪ್ಯೂಟರ್ ಆಪರೇಟರ್, ಲೆಕ್ಕಿಗರು, ಸರ್ವೇಯರ್, ಒಳಚರಂಡಿ ಕಾರ್ಯ ನಿರೀಕ್ಷಕರು, ಸಮುದಾಯ ಸಂಘಟಕರು, ದ್ವಿತೀಯ ದರ್ಜೆ ಸಹಾಯಕರು, ಕರ ವಸೂಲಿಗಾರರು,
ಪೌರಕಾರ್ಮಿಕರು, ಡ್ರೈವರ್ ಹೀಗೆ ಕೆಳಹಂತದ ಹುದ್ದೆಗಳು ಭರ್ತಿಯಾಗದೆ ಇರುವ ಹಿನ್ನೆಲೆ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತವೆ. ಅಭಿವೃದ್ಧಿ ಕಡೆಗೆ ಗಮನ ನೀಡಬೇಕಾದರೆ ಹುದ್ದೆಗಳ ಭರ್ತಿ ಆಗಬೇಕಿದೆ. ಬರೀ ಬೆಂಗಳೂರು, ಮೈಸೂರು ಪ್ರದೇಶದ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡದೆ ಬೇರೆ ಕಡೆಗಳಲ್ಲಿರುವ ಪಾಲಿಕೆಗಳಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ.
ಪಾಲಿಕೆಯಲ್ಲಿ ಕಾಯಂ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಇದರಿಂದಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಮೇಲೆ ಒತ್ತಡ ಹೆಚ್ಚಾಗಿದೆ. ಈಗಾಗಲೇ ಅವರನ್ನು ಕಾಯಂಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಒತ್ತಡ ಕಡಿಮೆ ಮಾಡಲು ಮಹಾನಗರ ಪಾಲಿಕೆಗೆ ಒಂದು ಸಾವಿರ ಜನ ಪೌರ ಕಾರ್ಮಿಕರನ್ನು ಹೊಸದಾಗಿ ನೇಮಿಸಿಕೊಳ್ಳಬೇಕು.