ಬೆಳಗಾವಿ: ಬರಗಾಲ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮರೋಪಾದಿಯಲ್ಲಿ ಸ್ಪಂದಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು.
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನದಲ್ಲಿ ಮಾತನಾಡಿದ ಅವರು, ಬರ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಉತ್ತರ ಕರ್ನಾಟಕದ ಹೆಬ್ಬಾಗಿಲು ಕುಂದಾನಗರಿ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಹೊಸ ಸರ್ಕಾರ ಬಂದು ಆರು ತಿಂಗಳು ಕಳೆಯುತ್ತಿದೆ. ಕಳೆದ 50 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಭೀಕರ ಬರಗಾಲ ರಾಜ್ಯದಲ್ಲಿ 400- 450 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅಂತಹ ಈ ಸಂದರ್ಭದಲ್ಲಿ ರೈತರು ತೀವ್ರವಾದಂತಹ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗಮನ ಸೆಳೆದರು.
ಸಂಕಷ್ಟದಲ್ಲಿ ಇರುವ ರೈತರು ರಾಜ್ಯ ಸರ್ಕಾರದ ಕಡೆಗೆ ಮುಖ ಮಾಡಿಕೊಂಡಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ, ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ರಾಜ್ಯದಲ್ಲಿ ಒಬ್ಬ ಅನುಭವಿ ಶಾಸಕರು ಮುಖ್ಯಮಂತ್ರಿಗಳಾಗಿ ಆ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಸನ್ಮಾನ್ಯ ಎಸ್.ಎಂ.ಕೃಷ್ಣ ಅವರು ಸಂಪೂರ್ಣವಾಗಿ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದರು. ಅದರ ನಂತರ ಸಂಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದವರು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು; ಅದರ ಜೊತೆಗೆ 14 ಬಜೆಟ್ ಅನ್ನ ಮಂಡನೆ ಮಾಡಿದ ಸಿಎಂ ಎಂಬ ಹೆಗ್ಗಳಿಕೆಗೂ ಕೂಡ ಸಿದ್ದರಾಮಯ್ಯನವರು ಪಾತ್ರರಾಗಿದ್ದಾರೆ ಎಂದು ವಿವರಿಸಿದರು.
ಈ ನಾಡಿನ ರೈತರು ಈ ಸರ್ಕಾರದಿಂದ, ಮುಖ್ಯಮಂತ್ರಿಗಳಿಂದ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ಈ ಸರ್ಕಾರ ಸಮರೋಪಾದಿಯಲ್ಲಿ ರೈತರ ಸಮಸ್ಯೆಗೆ ಸ್ಪಂದನೆ ನೀಡುÀತ್ತದೆ ಎಂದು ಬಹಳ ನಿರೀಕ್ಷೆಯಲ್ಲೇ ರೈತರು ಕುಳಿತುಕೊಂಡಿದ್ದರು ಎಂದು ಗಮನ ಸೆಳೆದರು.
ನಾಡು ಕಂಡಂತಹ ಅಪ್ರತಿಮ ರೈತನಾಯಕ ಸನ್ಮಾನ್ಯ ಬಿ ಎಸ್. ಯಡಿಯೂರಪ್ಪನವರು ಬೆಳಗಾವಿಯಲ್ಲಿಈ ಒಂದು ಸುವರ್ಣ ಸೌಧದ ವಿಧಾನಸೌಧದ ಮುಖೇನ ಈ ನಾಡಿನ ದೊರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಬಗ್ಗೆ ಯೋಜಿಸಿದ್ದರು. ಇಂದಿನ ಮುಖ್ಯಮಂತ್ರಿಗಳು ಗಮನಹರಿಸಬೇಕು ಎಂದು ಕೋರಿದರು.