ವಾತಾವರಣದಲ್ಲಿ ಶೀತಗಾಳಿಯ ಪರಿಣಾಮ ಕೆಮ್ಮು, ಗಂಟಲು ನೋವು, ನೆಗಡಿ ಆರಂಭಗೊಳ್ಳುತ್ತದೆ.
ಆದರೆ ಶೀತ, ಕೆಮ್ಮಿನಿಂದ ಬಳಲುತ್ತಿದ್ದವರು ಅದೆಷ್ಟೇ ಔಷಧಿ ಬಳಸಿದರು ಕೆಲ ದಿನದಲ್ಲಿ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾದ್ರೆ ಶೀತ, ಕೆಮ್ಮುವಿನಂತ ಕಾಯಿಲೆಯಿಂದ ದೂರವಿರಲು ಕೆಲವು ಸಲಹೆ ಇಲ್ಲಿದೆ.
ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿರುತ್ತದೆ. ನಾವು ನಿತ್ಯ ಸೇವಿಸುವ ಆರೋಗ್ಯದಲ್ಲಿ ಕಾಳು ಮೆಣಸಿನ ಪುಡಿ ಅಥವಾ ಕಾಳು ಮೆಣಸು ಬಳಸುವುದರಿಂದ ಈ ಕಾಲೋಚಿತ ಕಾಯಿಲೆಗಳಿಂದ ಪಾರಾಗಬಹುದು. ಕಾಳು ಮೆಣಸನ್ನು ಕಪ್ಪು ಚಿನ್ನ ಅಂತಲೂ ಕರೆಯುತ್ತಾರೆ. ಏಕೆಂದರೆ ಕಾಳು ಮೆಣಸಿನಲ್ಲಿ ಅಷ್ಟೊಂದು ಆರೋಗ್ಯಕರ ಅಂಶಗಳಿದ್ದು, ಇದೊಂದು ಅಮೂಲ್ಯ ವಸ್ತು ಎಂದು ಪರಿಗಣಿಸಲಾಗಿದೆ. ಕಾಳು ಮೆಣಸು ಹಲವು ಆರ್ಯುವೇದ ಔಷಧ ತಯಾರಿಕೆಯಲ್ಲೂ ಬಳಸಲ್ಪಡುತ್ತದೆ. ಹೀಗಾಗಿ ಕಾಳು ಮೆಣಸು ಔಷಧಿ ಗುಣವುಳ್ಳ ಕಪ್ಪು ಚಿನ್ನ ಎಂದು ಕರೆಯಲಾಗಿದೆ.
ಕಾಳು ಮೆಣಸಿನಿಂದಾಗುವ ಪ್ರಯೋಜನಗಳೇನು?
ತೂಕ ಇಳಿಸಲು: ಕಾಳು ಮೆಣಸಿನಲ್ಲಿ ಕೊಬ್ಬಿನಾಂಶ ಕರಗಿಸುವಂತಹ ಅಂಶ ಇರುವುದರಿಂದ ಹೊಸದಾಗಿ ರೂಪುಗೊಳ್ಳುವ ಫ್ಯಾಟ್ ಸೆಲ್ಸ್ಗಳ ಕರಗಿಸಲಿದೆ. ಹೀಗಾಗಿ ನೀವು ತೂಕ ಇಳಿಸುವ ಜೊತೆ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕೆಂದರೆ ಕಾಳು ಮೆಣಸು ಸುಲಭ ದಾರಿಯಾಗಿದೆ.
ದೇಹ ನಿರ್ವಿಷಿಕರಣ (ಡಿಕಾಕ್ಸಿಕೇಶನ್): ಕಾಳು ಮೆಣಸಿನಲ್ಲಿ ಡಿಟಾಕ್ಸಿಕೇಶನ್ ಅಂಶವಿದ್ದು, ನಿಮಗೆ ಅಲರ್ಜಿಯಂತಹ ಸಮಸ್ಯೆ ಇದ್ದರೆ ಕರಿಮೆಣಸು ಸಮಸ್ಯೆಗೆ ಪರಿಹಾರ ನೀಡಲಿದೆ. ಕಾಳುಮೆಣಸಿನ ನಿಯಮಿತ ಸೇವನೆಯು ಕಿಡ್ನಿ, ಲಿವರ್ ಶುದ್ಧೀಕರಣಕ್ಕೂ ಕಾರಣವಾಗುತ್ತದೆ.
ಕ್ಯಾನ್ಸರ್ಗೂ ಮದ್ದು: ಕಾಳು ಮೆಣಸಿನಲ್ಲಿ ಕ್ಯಾನ್ಸರ್ ವಿರೋಧಿ ಲಕ್ಷಣವೂ ಇದೆ. ನಿಯಮಿತ ಬಳಕೆಯು ಕ್ಯಾನ್ಸರ್ ತಡೆಗಟ್ಟಲು ಹಾಗೂ ನಿತ್ಯದ ಆಹಾರದಲ್ಲಿ ಕರಿಮೆಣಸಿನ ಬಳಕೆಯು ಹಲವು ರೀತಿಯ ಕ್ಯಾನ್ಸರ್ ಕಣಗಳು ದೇಹದ ಅಂಗಗಳ ಮೇಲೆ ಪರಿಣಾಮ ಬೀರುವುದನ್ನು ತಡೆಯುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಕರಿಮೆಣಸು ಆಹಾರ ಕ್ರಮದಲ್ಲಿ ಬೆರೆತರೆ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆ ಸರಾಗವಾಗಲಿದೆ. ಕೆಲ ಆಹಾರದಿಂದ ಅಜೀರ್ಣ ಸಮಸ್ಯೆ ತಲೆದೂರಬಹುದು ಇದನ್ನು ತಡೆಗಟ್ಟಬೇಕಾದರೆ ಕಾಳು ಮೆಣಸಿನ ಬಳಕೆ ಉತ್ತಮ ಪರಿಹಾರ ಕ್ರಮವಾಗಿದೆ.
ಕೂದಲು ಉದುರುವಿಕೆ ತಡೆಗಟ್ಟಲು: ಕಾಳು ಮೆಣಸು ಕೂದಲು ಉದುರುವಿಕೆ ಸಮಸ್ಯೆಗೂ ಪರಿಹಾರವಾಗಿದೆ. ಕರಿಮೆಣಸಿನ ಪುಡಿಯನ್ನು ತ್ರಿಪಲಾ ಪುಡಿಯೊಂದಿಗೆ ಬೆರೆಸಿ ಕೂದಲು ಉದುರುವ ಜಾಗಕ್ಕೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗಲಿದೆ. ತ್ರಿಪಲಾ ಪುಡಿಯು ಮೂರು ಫಲಗಳ ಮಿಶ್ರಣವಾಗಿದ್ದು, ಕಫಾ, ವಾತಾ ಹಾಗೂ ಪಿತ್ತ ನಿವಾರಣೆಗೆ ಸಹಾಯಕವಾಗಿದೆ.
ಸಕ್ಕರೆ ಅಂಶದ ಮೇಲೆ ಹಿಡಿತ : ನಮ್ಮ ರಕ್ತದಲ್ಲಿ ಸೂಕ್ತ ಪ್ರಮಾಣದ ಸಕ್ಕರೆಯ ಅಂಶ ಅಗತ್ಯವಾಗಿರುತ್ತದೆ. ಆದರೆ ನಮ್ಮ ಆಹಾರ ಕ್ರಮದಲ್ಲಿ ಏರುಪೇರಾದರೂ ಈ ಸಕ್ಕರೆ ಅಂಶ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು ಕಂಡುಬರುತ್ತದೆ. ಆದರೆ ಕಾಳು ಮೆಣಸು ಗ್ಲೊಕೋಸ್ ಮೆಟಾಬಾಲಿಸಂ ಅನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಈ ಹಿನ್ನೆಲೆ ಮಧುಮೇಹ ಹೊಂದಿರುವವರು ಸಹ ಕಾಳು ಮೆಣಸು ಮಿಶ್ರಿತ ಆಹಾರವನ್ನು ಸೇವಿಸಬಹುದು.
ಚರ್ಮ ಸಂಬಂಧಿ ಸಮಸ್ಯೆಗೆ ಪರಿಹಾರ: ಮೊದಲೇ ಹೇಳಿದಂತೆ ಕಾಳು ಮೆಣಸಿನ ಹಲವು ಔಷಧಿ ಗುಣಗಳ ಸಾಲಿನಲ್ಲಿ ಅಲರ್ಜಿ ನಿವಾರಣೆ ಮುಖ್ಯವಾಗಿದೆ. ಕರಿಮೆಣಸು ಸೇವನೆಯು ಚರ್ಮದ ರಕ್ಷಣೆಗೆ ನೆರವಾಗುತ್ತದೆ. ಮೊಡವೆ, ಕಾಲೋಚಿತ ಅಲರ್ಜಿ, ಸುಕ್ಕಾಗುವುದು ಸೇರಿದಂತೆ ಚರ್ಮ ಸಂಬಂಧಿ ಸಮಸ್ಯೆಗೆ ಪರಿಹಾರವಾಗಿದೆ.