ಬೆಳಗಾವಿ:– ಬೆಂಗಳೂರಿನಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಕೊಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆ ರಾಜರಾಜೇಶ್ವರಿ ನಗರದ ಕ್ಷೇತ್ರದ ಶಾಸಕ ಮುನಿರತ್ನ ಅವರು, ತಮ್ಮ ಕ್ಷೇತ್ರದಲ್ಲಿ ವಾರ್ಡ್ ನಂ. 73 ರಲ್ಲಿ 2 ಎಕರೆಯ ಪಾರ್ಕ್ ಜಾಗ ಒತ್ತುವರಿಯಾಗಿದೆ. ಕೆಲವರು ಪಾರ್ಕ್ಗೆ ಬೋರ್ಡ್ ಹಾಕಿದ್ದು, ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ ಎಂದು ತಿಳಿಸಿದ್ದಾರೆ. ಪ್ರಮೋದ್ ಲೇಔಟ್ನಲ್ಲಿ 2 ಎಕರೆ ವಿಸ್ತೀರ್ಣದಲ್ಲಿರುವ ಮತ್ತೊಂದು ಪಾರ್ಕ್ನಲ್ಲಿದ್ದ ಸಲಕರಣೆಗಳನ್ನು ರಾತ್ರೋರಾತ್ರಿ ತೆರವು ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪ್ರಭಾವಿಗಳ ಹೆಸರನ್ನು ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಇದಕ್ಕೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಅವರು, ನಿಮಗಿಂತ ಪ್ರಭಾವಿಗಳಿದ್ದಾರೆಯೇ ಎಂದು ಮುನಿರತ್ನ ಅವರನ್ನು ಛೇಡಿಸುತ್ತಲೇ ಯಾರೇ ಸರ್ಕಾರಿ ಬಿಡಿಎ, ಬಿಬಿಎಂಪಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದರೂ ನಮ್ಮ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸುತ್ತದೆ. ಸರ್ಕಾರದ ಆಸ್ತಿ, ರಕ್ಷಣಾ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಒತ್ತುವರಿದಾರರ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮ ಜರುಗಿಸಲಾಗುವುದು. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ನಿರ್ದಿಷ್ಟವಾಗಿ ಯಾವುದೇ ಪ್ರಕರಣಗಳ ವಿರುದ್ಧ ಮಾಹಿತಿ ನೀಡಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.