ಬೆಂಗಳೂರು ಮಹಾನಗರವಾಗಿ ಬೆಳೆದಿದೆ. ಆದ್ರೆ ಕೆಲವು ಪದೇಶಗಳಲ್ಲಿ ಕೆಲವು ಆಚರಣೆಗಳಲ್ಲಿ ಇನ್ನೂ ಹಳ್ಳಿಯ ಸೊಗಡು ಉಳಿದುಕೊಂಡಿದೆ. ಹೌದು ನಗರ ಬಸವನಗುಡಿಯಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಎಲ್ಲಿ ನೋಡಿದ್ರು ರಾಶಿ ರಾಶಿ ಕಡಲೆ, ಕಾಲಿಡಲು ಜಾಗವಿಲ್ಲದಷ್ಟು ಜನಜಂಗಳಿಯ ಅದ್ದೂರಿ ಹಬ್ಬಕ್ಕೆ ಇವತ್ತು ಚಾಲನೆ ಸಿಕ್ಕಿದೆ. ಹಾಗಾದ್ರೆ ಹೇಗಿದೆ ಈ ಬಾರಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಬನ್ನಿ ನೋಡಿಕೊಂಡು ಬರೋಣ
ರಸ್ತೆ ಬದಿಗಳಲ್ಲೆಲ್ಲ ರಾಶಿ ರಾಶಿ ಕಡಲೆ ಕಾಲಿಡಲೂ ಜಾಗವಿಲ್ಲದಷ್ಟು ಜನಜಂಗುಳಿ. ಅತ್ತಿತ್ತ ನೋಡಿದರೆ ಗಿರಗಿಟ್ಲೆ, ಉಸಿರುಬುಂಡೆ, ಪೀಪಿ, ಮಿಟಾಯಿ ಮಳಿಗೆಗಳು. ಅರೆ! ಇದ್ಯಾವ ಊರಿನ ಜಾತ್ರೆ ಎಂದು ಆಶ್ಚರ್ಯವಾಯ್ತೇ?ಇಂದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ.ಹೌದು . ಕಾರ್ತಿಕ ಸೋಮವಾರ ಬಂತೆಂದರೆ ಬಸವನಗುಡಿಯಲ್ಲಿ ಹೀಗೊಂದು ಹೊಸ ಪ್ರಪಂಚವೇ ಸೃಷ್ಟಿಯಾಗತ್ತೆ. ಕಾಂಕ್ರೀಟ್ ಕಾಡಿನಲ್ಲಿ ಮಾಲ್ ಸಂಸ್ಕೃತಿಯನ್ನೇ ನೋಡಿ ನೋಡಿ ಬೋರ್ ಹೊಡೆದ ಬೆಂಗಳೂರಿಗರಿಗೆ ಕಡಲೆಕಾಯಿ ಕಾಯಿ ಪರಿಷೆ ಎಂದರೆ ಹಬ್ಬವೋ ಹಬ್ಬ.ಈ ಪಾರಂಪರಿಕ ಹಬ್ಬಕ್ಕೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿತ್ತು. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷಗೆ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಮಣ್ಯ ವಿಧ್ಯುಕ್ತ ಚಾಲನೆ ನೀಡಿದ್ರು..
ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ ಸಂಭ್ರಮ ಕಳೆಗಟ್ಟಿದೆ. ದೊಡ್ಡಗಣಪತಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಉದ್ಘಾಟನೆಯ ಮೊದಲ ದಿನವೇ ಪರಿಷೆ ಜನರಿಂದ ತುಂಬಿ ಹೋಗಿದೆ. ಪರಿಷೆಯಲ್ಲಿ ಕಡಲೆ ಕಾಯಿ ಖರೀದಿ ಭರಾಟೆ ಒಂದು ಕಡೆಯಾದರೆ ಮತ್ತೊಂದು ಕಡೆ ಅಂಗಡಿ- ಮುಗ್ಗಟ್ಟುಗಳ ಮುಂದೆ ಜನರು ಕಿಕ್ಕಿರಿದು ಸೇರಿದ್ದಾರೆ. ಕನಕಪುರ ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಕೋಲಾರ, ಮೈಸೂರು ಭಾಗದ ವ್ಯಾಪಸ್ಥರು ಬಂದಿದ್ದಾರೆ. ಈ ಬಾರಿ ನಾಲ್ಕೈದು ಕಡಲೆಕಾಯಿ ತಳಿಗಳು ಪರಿಷೆಯಲ್ಲಿ ವ್ಯಪಾರ ಮಾಡಲಾಗ್ತಿದೆ. ನಾಟಿ, ಫಾರಂ, ಬಾದಾಯಿ ಹಾಗೂ ಬೋಂಡಾ ಕಡಲೆಕಾಯಿ ಮಾರಾಟವಾಗ್ತಿದೆ.
ಪರಿಷೆಯಲ್ಲಿ ಭಿನ್ನ ಭಿನ್ನ ಜಾತಿಯ ಹಸಿ ಹಾಗೂ ಹುರಿದ ಕಡಲೆಕಾಯಿ ಸೇರು ಒಂದಕ್ಕೆ 20 ರಿಂದ 30 ರೂ ಮಾರಾಟ ಮಾಡಲಾಗ್ತಿದೆ. ರೈತರು ತಾವು ಬೆಳೆದ ಕಡಲೆಕಾಯಿಯನ್ನ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗ್ತಿದೆ. ಕಡಲೆಕಾಯಿ ಪರಿಷೆ ಸಾಕಷ್ಟು ವ್ಯಾಪಾರಿಗಳಿಗೆ ಆದಾಯ ಬರಲಿದೆ. ಕುಟುಂಬ ಸಮೇತ ಪರಿಷೆಗೆ ಬನ್ನಿ ಅಂತ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದರು
ಕಂಬಳಿ ಹೊದ್ದು ಮಲಗುವಂತಹ ಚುಮು ಚುಮು ಚಳಿಗೆ ಪರಿವಾರ, ಗೆಳೆಯರೊಂದಿಗೆ ಬಸವನಗುಡಿ ಸುತ್ತಾಡಿ ಬಡವರ ಬಾದಾಮಿ ಬಿಸಿ ಬಿಸಿ ಕಡಲೆಕಾಯಿ ಸವಿಯುವುದೇ ಒಂದು ಮರೆಯಲಾಗದ ಅದ್ಭುತ ಅನುಭವ. ಹೀಗಾಗಿ ರಸ್ತೆ ಉದ್ದಕ್ಕೂ ರಾಶಿ ರಾಶಿ ಕಡಲೆಕಾಯಿ, ಹುರದಿದ್ದು, ಎರಡು ಬೀಜ, ಮೂರು ಬೀಜ ಅಷ್ಟೆ ಅಲ್ಲಾ, ಹಸಿ ಕಡಲೆಕಾಯಿ, ಬೇಯಿಸಿದ ಕಡಲೆಕಾಯಿ. ಹೀಗೆ ಎಂದೆಂದೂ ಸವಿಯದ ನಾನಾ ರೀತಿಯ ಕಡಲೆಕಾಯಿ ತಿನ್ನಬೇಕಿದ್ರೆ ಒಮ್ಮೆ ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಬನ್ನಿ. .ಜೊತೆಗೆ ಪರಿಷೆಗೆ ತೆರಳಿ ಬಸವಣ್ಣನ ಅನುಗ್ರಹ ಸಹ ಪಡೆದುಕೊಳ್ಳಬಹುದು.
ಕೃಷ್ಣಮೂರ್ತಿ ಪ್ರಜಾ ಟಿವಿ ಬೆಂಗಳೂರು