ಮೈಸೂರು:- ಅರ್ಜುನ ಆನೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆ ಕ್ಷಣದಲ್ಲಿ ಆಗಿದ್ದೇನು? ಹಾಗೂ ಕಾರ್ಯಾಚರಣೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ಈ ಸುದ್ದಿ ಪೂರ್ತಿ ಓದಿ.
ಕಾಡಾನೆಗಳ ಕಾರ್ಯಾಚರಣೆ ಆರಂಭವಾಗಿದ್ದು ನವೆಂಬರ್ 23 ರಂದು. ಒಟ್ಟು ಎರಡು ತಂಡಗಳಾಗಿ ಕಾಡಾನೆಗಳ ಕಾರ್ಯಾಚರಣೆ ನಡೆಸಲಾಗುತಿತ್ತು. ಒಂದು ತಂಡ ಮೂಡಿಗೆರೆ ಬಳಿ ಕಾರ್ಯಾಚರಣೆ ನಡೆಸುತಿತ್ತು. ಮತ್ತೊಂದು ತಂಡ ಸಕಲೇಶಪುರದ ಬಳಿ ಕಾರ್ಯಾಚರಣೆ ನಡೆಸುತ್ತಿತ್ತು. ಸಕಲೇಶಪುರೆ ಬಳಿಯ ಕಾರ್ಯಾಚರಣೆಯ ತಂಡದಲ್ಲಿದ್ದದ್ದು ಅರ್ಜುನ, ಕರ್ನಾಟಕದ ಭೀಮ, ಧನಂಜಯ ಮತ್ತು ಪ್ರಶಾಂತ್ ಸೇರಿ ಒಟ್ಟು 6 ಆನೆಗಳು. ತಂಡದಲ್ಲಿ ಡಾ. ರಮೇಶ್, ರಂಜನ್ ಹಾಗೂ ಮಾವುತ ಕಾವಾಡಿಗಳಿದ್ದರು.
ಅರ್ಜುನ ಆನೆ ಇದ್ದ ತಂಡಕ್ಕೆ 9 ಆನೆಗಳ ಕಾರ್ಯಾಚರಣೆ ಟಾಸ್ಕ್ ನೀಡಲಾಗಿತ್ತು. ಸಾಮಾನ್ಯವಾಗಿ ಕಾಡಿನಲ್ಲಿರುವ ಎಲ್ಲಾ ಆನೆಗಳಿಗೂ ರೇಡಿಯೋ ಕಾಲರ್ಗಳನ್ನು ಹಾಕುವಂತಿಲ್ಲ. ಮೊದಲು ಕಾರ್ಯಾಚರಣೆ ಮಾಡಬೇಕಾದ ಆನೆಗಳನ್ನು ಗುರುತಿಸಲಾಗುತ್ತದೆ. ಅವುಗಳ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಅವುಗಳ ಚಲನ ವಲನಗಳ ಬಗ್ಗೆ ನಿಗಾ ಇಡಲಾಗುತ್ತದೆ. ಎಲ್ಲಾ ಆದ ಮೇಲೆ ಕಾರ್ಯಾಚರಣೆ ನಡೆಸಲಾಗುತ್ತದೆ. ಇದೇ ರೀತಿಯಲ್ಲಿ ಈ ತಂಡ ಒಟ್ಟು 6 ಆನೆಗಳನ್ನು ಹಿಡಿದು. ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅಲ್ಲಿಂದ ಸ್ಥಳಾಂತರ ಮಾಡಿತ್ತು. ಅದರಲ್ಲಿ ಮೂರು ಹೆಣ್ಣು ಆನೆ. ಎರಡು ಗಂಡಾನೆ ಹಾಗೂ ಒಂದು ಮಕ್ನಾ ಆನೆ ಸಹಾ ಸೇರಿದ್ದವು. ಈ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಸಹಜವಾಗಿ ತಂಡಕ್ಕೆ ಖುಷಿ ಕೊಟ್ಟಿತ್ತು.
6 ಆನೆ ಕಾರ್ಯಾಚರಣೆ ಮುಗಿಸಿದ್ದ ತಂಡ, ತಮ್ಮ 7ನೇ ಟಾರ್ಗೆಟ್ ಆಗಿದ್ದ ಆನೆಯ ಹುಡುಕಾಟದಲ್ಲಿ ಕಾಡಿನ ಕಡೆ ಹೊರಟಿತ್ತು. ಸಾಮಾನ್ಯವಾಗಿ ಕಾರ್ಯಾಚರಣೆ ಮಾಡುವ ಕಾಡಾನೆಗಳಿಗೆ ಅರಣ್ಯ ಇಲಾಖೆಯವರು ಗುರುತಿಗಾಗಿ ತಾತ್ಕಾಲಿಕ ಹೆಸರು ನೀಡುತ್ತಾರೆ. ಅದರಂತೆ 7ನೇ ಆನೆಗೆ ನೀಡಿದ ಹೆಸರು ವಿಕ್ರಾಂತ್. ಸಾಮಾನ್ಯವಾಗಿ ಟಾರ್ಗೆಟ್ ಕಾರ್ಯಾಚರಣೆಗೂ ಮುನ್ನ ಒಂದಷ್ಟು ಹೋಮ್ ವರ್ಕ್ ಮಾಡಿಕೊಳ್ಳಲಾಗುತ್ತದೆ. ಅದರಂತೆ ಕಾರ್ಯಾಚರಣೆಗೂ ಮುನ್ನ ಒಬ್ಬ ಸಿಬ್ಬಂದಿ ಹೋಗಿ ಅರಣ್ಯದಲ್ಲಿ ನೋಡಿಕೊಂಡು ಬರುತ್ತಾನೆ. ಅದರಂತೆ ಅಂದು ಸಹ ಒಬ್ಬ ಹೋಗಿ ನೋಡಿ ಬಂದಿದ್ದ. ಆದರೆ, ಆತನಿಗೆ ಟಾರ್ಗೆಟ್ ಇರುವ ಆನೆ ಕಾಣ ಸಿಗುವುದಿಲ್ಲ. ಅದರ ಬದಲು ಬೇರೊಂದು ಆನೆ ಕಾಣಿಸುತ್ತದೆ. ಅದು ಸಹ ಗಾತ್ರದಲ್ಲಿ ದೊಡ್ಡದಾಗಿರುತ್ತದೆ.
ಅದನ್ನು ಆತ ಹೇಳಿದ ತಕ್ಷಣ ತಂಡದಲ್ಲಿದ್ದ ವೈದ್ಯ ರಮೇಶ್ ಅರೆವಳಿಕೆಯ ಎರಡು ಡೋಸ್ ಸಿದ್ದಪಡಿಸುತ್ತಾರೆ. ಒಂದು ತಮ್ಮ ಟಾರ್ಗೆಟ್ ಆಗಿರುವ ವಿಕ್ರಾಂತ್ ಆನೆಗೆ, ಅದು ಹೆಚ್ಚು ಡೋಸ್ ಹೊಂದಿರುತ್ತದೆ. ಎರಡನೆಯದು ಸ್ಬಲ್ಪ ಕಡಿಮೆ ಡೋಸ್, ಹೊಸ ಆನೆ ಅಂದರೆ ಕರ್ನಾಟಕ ಭೀಮನ ರೀತಿ ಇರುವ ಆನೆಗೆ ಎಂದು ಸಿದ್ದಪಡಿಸುತ್ತಾರೆ. ಅದರಲ್ಲಿ ವೈದ್ಯ ರಮೇಶ್ ಅರ್ಜುನನ ಮೇಲೆ ಹೆಚ್ಚು ಡೋಸ್ ಇರುವ ಗನ್ ಹಿಡಿದು ಕೂರುತ್ತಾರೆ. ರಂಜನ್ ಪ್ರಶಾಂತ್ ಆನೆ ಮೇಲೆ ಕಡಿಮೆ ಡೋಸ್ ಇರುವ ಗನ್ ಹಿಡಿದು ಕೂರುತ್ತಾರೆ. ಉಳಿದ ಆನೆಗಳ ಮೇಲೆ ಇತರ ವಸ್ತುಗಳನ್ನು ಇಟ್ಟು ಕಾರ್ಯಾಚರಣೆಗೆ ಹೊರಡಲಾಗುತ್ತದೆ. ಮಧ್ಯಾಹ್ನ 1.30ಗೆ ಕಾಡಿನ ಒಳಗೆ ಹೋಗಲಾಗುತ್ತದೆ. ಅರ್ಜುನ ಆನೆಯ ಮೇಲೆ ಮಾವುತ ವಿನು, ಡಾ ರಮೇಶ್, ಕರ್ನಾಟಕ ಭೀಮದ ಮಾವುತ ಗುಂಡ ಹಾಗೂ ಮತ್ತೊಬ್ಬ ಅನಿಲ್ ಇರುತ್ತಾರೆ.
ಇನ್ನು ಪ್ರಶಾಂತ್ ಆನೆಯ ಮೇಲೆ ರಂಜನ್ ಹಾಗೂ ಇತರ ಮಾವುತ ಕಾವಾಡಿಗಳು ಇರುತ್ತಾರೆ. ಕಾಡಿನ ಒಳಗೆ ಹೋದ ತಕ್ಷಣ ತಂಡಕ್ಕೆ 7 ರಿಂದ 8 ಆನೆ ಕಾಣುತ್ತದೆ. ಅದರಲ್ಲಿ ಹೆಣ್ಣಾನೆಗಳು, ಮರಿಗಳು ಮತ್ತು ಒಂದು ಗಂಡಾನೆ ಇರುತ್ತದೆ. ಆದರೆ ಟಾರ್ಗೆಟ್ ನೀಡಿದ್ದ ಆನೆ ಅಲ್ಲಿ ಕಾಣುವುದಿಲ್ಲ. ಹೀಗಾಗಿ ತಂಡ ಈ ಆನೆ ಗುಂಪನ್ನು ಬಿಟ್ಟು ತಮ್ಮ ಟಾರ್ಗೆಟ್ ಆನೆಯನ್ನು ಹುಡುಕಿಕೊಂಡು ಹೊರಡುತ್ತಾರೆ. ಸ್ವಲ್ಪ ದೂರ ಹೋದಾಗ ದಟ್ಟ ನೀಲಗಿರಿ ಮರಗಳಿರುವ ಅರಣ್ಯದಲ್ಲಿ ಒಂದು ಒಂಟಿ ಆನೆ ನಿಂತಿರುತ್ತದೆ. ಆದರೆ, ಅದು ಟಾರ್ಗೆಟ್ ಆಗಿದ್ದ ವಿಕ್ರಾಂತ್ ಆನೆಯಾ ? ಅಥವಾ ಮಾಹಿತಿದಾರ ಹೋಗಿ ನೋಡಿಬಂದ ಕರ್ನಾಟಕ ಭೀಮ ಆನೆಯ ಎಂದು ಗೊತ್ತಾಗುವುದಿಲ್ಲ. ಆದರೂ ಅದನ್ನು ಕವರ್ ಮಾಡಲಾಗುತ್ತದೆ.
ಯಾವಾಗ ಕಾಡಾನೆ ವಾಪಸ್ಸು ಹೋಯಿತೋ ಆಗ ಎಲ್ಲರೂ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ವೈದ್ಯ ರಮೇಶ್ ಪ್ರಶಾಂತ್ ಬಳಿ ಹೋಗಿದ್ದಾರೆ. ಇತ್ತ ಮಾವುತ ವಿನು ಸಹಾ ಅರ್ಜುನನಿಂದ ದೂರ ಸರಿಯುತ್ತಾನೆ. ಅರ್ಜುನನ ಬಳಿ ಇದ್ದಿದ್ದು, ಅನಿಲ್ ಎಂಬ ಹುಡುಗ ಮಾತ್ರ. ಈ ವೇಳೆ ಕಾಡಾನೆ ಮತ್ತೆ ಅರ್ಜುನನ ಮೇಲೆ ದಾಳಿ ಮಾಡಿದೆ. ತಂಡದ ಬಳಿ ಆಗ ಎರಡು ರೀತಿಯ ಡೋಸ್ ಇತ್ತು. ಒಂದು ಸಂಪೂರ್ಣವಾಗಿ ಕಾಡಾನೆಯನ್ನು ನೆಲಕ್ಕೆ ಉರುಳಿಸುವುದು. ಇನ್ನೊಂದು ಮತ್ತು ಬರಿಸುವುದು. ಆದ್ರೆ, ವೈದ್ಯ ರಮೇಶ್ ಮತ್ತು ಬರಿಸುವ ಡೋಸ್ ಮಾತ್ರ ನೀಡಿದ್ದರಂತೆ.
ಕಾರಣ ಒಂದು ವೇಳೆ ಕಾಡಾನೆಯನ್ನು ನೆಲಕ್ಕುರುಳಿಸಿದ್ದರೆ ಅರ್ಜುನ ಆನೆ ಕಾಡಾನೆಯನ್ನು ಸಾಯಿಸುವ ಸಾಧ್ಯತೆ ಹೆಚ್ಚಾಗಿತ್ತಂತೆ. ಆಗ ಕಾಡಾನೆಯನ್ನು ಸಾಯಿಸಿದ ಆರೋಪ ಎದುರಾಗುತ್ತಿತ್ತು. ಆ ಕಾರಣಕ್ಕೆ ಮತ್ತು ಬರಿಸುವ ಡೋಸ್ ನೀಡಲಾಯಿತು ಎಂದು ವೈದ್ಯರ ಜೊತೆಯಿದ್ದಾತನ ಹೇಳಿದ್ದಾರೆ. ಅದು ಕಾಡಾನೆಗೆ ತಗುಲುತ್ತದೆ. ಆದರೂ ಅದಕ್ಕೆ ಮತ್ತು ಏರುವ ಮುನ್ನ ಕಾಡಾನೆ, ಅರ್ಜುನ ಆನೆಯನ್ನು ಸೋಲಿಸಿ ಅದನ್ನು ಕೊಂದು ಹಾಕಿ ಬಿಡುತ್ತದೆ