ಮೈಸೂರು:- ಬಿಜೆಪಿಯ ಅನಾಗರಿಕತೆ, ಮಹಿಳಾ ವಿರೋಧಿ ಧೋರಣೆಗೆ ಕನ್ನಡಿ ಆಗಿದೆ ಎಂದು ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಉಚ್ಚಾಟಿಸಿರುವುದು ಬಿಜೆಪಿಯ ಅನಾಗರಿಕತೆ ಹಾಗೂ ಮಹಿಳಾ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದರು.
ಸಂಸದೆಯಾದ ಮಹುವಾ ಅವರಿಗೆ ಮಾತನಾಡಲೂ ಅವಕಾಶ ಕೊಡದೇ ಕ್ರಮ ಕೈಗೊಂಡಿರುವುದನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ’ ಎಂದರು.
ಬಿಜೆಪಿಯು ಮಹಿಳೆಯರು, ರೈತರು, ದಲಿತರ ವಿರುದ್ಧವಿದೆ. ಕೇವಲ ಉದ್ಯಮಿಗಳ ಅನುಕೂಲಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಈ ರಹಸ್ಯ ಕಾರ್ಯಸೂಚಿಯನ್ನು ಮಹಿಳೆಯರು ಅರಿಯಬೇಕು. ಮೊಯಿತ್ರಾ ಅವರು ಮಾಡಿರುವ ತಪ್ಪಾದರೂ ಏನೆಂಬುದನ್ನೇ ಹೇಳದೇ ಅವರ ವಿರುದ್ಧ ಕ್ರಮ ಕೈಗೊಂಡಿರುವುದು, ಇಲ್ಲಸಲ್ಲದ ಆರೋಪ ಮಾಡಿರುವುದು ಖಂಡನೀಯ. ಅವರು ಬಿಜೆಪಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರು ಎಂಬ ಕಾರಣಕ್ಕೆ ಉಚ್ಚಾಟಿಸಲಾಗಿದೆ. ಅವರು ಟಿಎಂಸಿ ನಾಯಕಿಯಾದರೂ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದು ತಿಳಿಸಿದರು.
‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ’ ಎಂದರು.
‘ಮೈಸೂರಿಗೆ ನೀಡಿರುವ ಕೊಡುಗೆಗಳೇನು ಎಂಬುದನ್ನು ಸಂಸದ ಪ್ರತಾಪ ಸಿಂಹ ತಿಳಿಸಲಿ. ನಮ್ಮ ಯೋಜನೆಗಳನ್ನು ನಾನೇ ಮಾಡಿದ್ದು ಎಂದು ಸುಳ್ಳು ಹೇಳುತ್ತಾ ಓಡಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳು ಕೂಡ ಈಡೇರಿಲ್ಲ’ ಎಂದು ದೂರಿದರು.