ನವದೆಹಲಿ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ (Sudha Murthy) ಅವರು ಹಳೆಯ ಮತ್ತು ಹೊಸ ಸಂಸತ್ ಭವನಗಳಿಗೆ ಭೇಟಿ ನೀಡಿದರು. ನೂತನ ಭವನ ಕಣ್ತುಂಬಿಕೊಂಡು ‘ಸೋ ಬ್ಯೂಟಿಫುಲ್’.. ‘ಕನಸು ನನಸಾಗಿದೆ’ ಎಂದು ಬಣ್ಣಿಸಿದ್ದಾರೆ. ಎರಡೂ ಭವನಗಳನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಕನಸು ನನಸಾಗಿದೆ. ಇದು ಸುಂದರವಾಗಿದೆ. ಇದು ಕಲೆ, ಸಂಸ್ಕೃತಿ, ಭಾರತೀಯ ಇತಿಹಾಸ. ಎಲ್ಲವೂ ಸುಂದರವಾಗಿದೆ ಎಂದು ಹಾಡಿ ಹೊಗಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾದ ಒಂದು ದಿನದ ನಂತರ ಸುಧಾಮೂರ್ತಿಯವರು ಸಂಸತ್ತಿಗೆ ಭೇಟಿ ನೀಡಿದರು. ಅಲ್ಲಿನ ಮಹಿಳಾ ಉದ್ಯಮಿಗಳು, ಶಿಕ್ಷಣತಜ್ಞರು ಮತ್ತು ವಿದ್ಯಾರ್ಥಿಗಳೊಂದಿಗೆ ತಮ್ಮ ಸ್ಪೂರ್ತಿದಾಯಕ ಜೀವನ ಪಯಣವನ್ನು ಹಂಚಿಕೊಂಡರು.
ಸುಧಾಮೂರ್ತಿ ಅವರು ಸಾಮಾಜಿಕ ಕಾರ್ಯ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ 2006 ರಲ್ಲಿ ಪದ್ಮಶ್ರೀ ಹಾಗೂ 2023 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಭೇಟಿ ಕುರಿತು ರಾಷ್ಟ್ರಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದ್ದು, ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಪ್ರಸಿದ್ಧ ಲೇಖಕಿ ಮತ್ತು ಲೋಕೋಪಕಾರಿ ಸುಧಾಮೂರ್ತಿ ಅವರು ಮಹಿಳಾ ಉದ್ಯಮಿಗಳು, ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ತಮ್ಮ ಸ್ಫೂರ್ತಿದಾಯಕ ಜೀವನ ಪ್ರಯಾಣದ ನೆನಪನ್ನು ಹಂಚಿಕೊಂಡಿದ್ದಾರೆ.