ತಿರುವನಂತಪುರಂ: ಕೇರಳದ (Kerala) ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ವರದಕ್ಷಿಣೆಗೆಬೇಡಿಕೆ ಇಟ್ಟದ್ದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತಳನ್ನು ಶಹನಾ (26) ಎಂದು ಗುರುತಿಸಲಾಗಿದೆ. ಇದೀಗ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಅವರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.
ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ ಶಹಾನಾ (Shahana) ಸಂಸ್ಥೆಯ ಬಳಿಯ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ನೇಹಿತ ಮದುವೆಯ ಪ್ರಸ್ತಾಪದಿಂದ ಹಿಂದೆ ಸರಿದ ನಂತರ ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.
ಗೆಳೆಯನ ಕುಟುಂಬವು ಚಿನ್ನ, ಜಮೀನು ಹಾಗೂ ಬಿಎಂಡಬ್ಲ್ಯು ಕಾರಿನ ರೂಪದಲ್ಲಿ ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿತ್ತು. ಆದರೆ ಈ ಬೇಡಿಕೆಗಳನ್ನು ಈಡೇರಿಸಲು ಶಹಾನಾ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪಿಜಿ ವೈದ್ಯರ ಸಂಘದ ಪ್ರತಿನಿಧಿಯೂ ಆಗಿದ್ದ ವೈದ್ಯ ಈಕೆಯ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದ್ದಾನೆ. ಸದ್ಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಅಡ್ವೊಕೇಟ್ ಸತಿದೇವಿಯವರು ಶಹಾನಾ ಮನೆಗೆ ತೆರಳಿ ತಾಯಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ತಾಯಿ ಒತ್ತಾಯಿಸಿದ್ದಾರೆ. ವೈದ್ಯನ ಮನೆಯವರು ವರದಕ್ಷಿಣೆಗೆ (Dowry) ಬೇಡಿಕೆ ಇಟ್ಟರೆ ಅವರ ವಿರುದ್ಧ ವರದಕ್ಷಿಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಸತಿದೇವಿ ತಿಳಿಸಿದ್ದಾರೆ. ಇತ್ತ ವೈದ್ಯಕೀಯ ಪಿಜಿ ವೈದ್ಯರ ಸಂಘವು ಆರೋಪಿ ವೈದ್ಯನನ್ನು ತಮ್ಮ ಸಂಘಟನೆಯ ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕಿದೆ.