ಹುಬ್ಬಳ್ಳಿ : ಭಾರತ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಭಾರತ ಸೇರ್ಪಡೆಯಾಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಕಲ್ಪ ಮಾಡಿದ್ದು, ಭಾರತ ಸಹ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. 2047 ರೊಳಗೆ ಅಭಿವೃದ್ಧಿ ಹೊಂದಿದ ದೇಶವಾಗಿಸಲು ನಾನು ಕೂಡ ಬದ್ಧನಿದ್ದೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದರು. ಇಂದು ವರೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯಬೇಕು. ಜನರಿಗೆ ಖಾಯಿಲೆಗಳು ಬಂದಾಗ ಚಿಕಿತ್ಸೆಗೆ ಹೆಚ್ಚು ಹಣ ಬೇಕಾಗುತ್ತದೆ. ಆಗ ಸರ್ಕಾರದ ಯೋಜನೆಗಳು ಸಹಾಯಕವಾಗಲಿವೆ. ಆಯುಷ್ಮಾನ್ ಭಾರತ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು. ವ್ಯಾಪಾರ ಆರಂಭಿಸಲು ಮುದ್ರಾ ಯೋಜನೆಯಡಿ ಲೋನ್ ಪಡೆದುಕೊಳ್ಳಲು ಅವಕಾಶವಿದೆ.
ರಾಸಾಯನಿಕ ಗೊಬ್ಬರ ಹಾಕಲಾರದೆ ಸಾವಯವ ಗೊಬ್ಬರ ಬಳಸಿ ಬೆಳೆಗಳನ್ನು ಬೆಳೆಯಬೇಕು. ಬ್ಯಾಂಕಿನಿಂದ ಆರ್ಥಿಕ ಸಹಾಯಧನ ಕೂಡಲೇ ದೊರೆಯಲಿದ್ದು, ಅದರ ಉಪಯೋಗವನ್ನು ಪಡೆದುಕೊಳ್ಳಲು ಮುಂದಾಗಬೇಕು. ಉಜ್ವಲ್ ಯೋಜನೆಯಡಿ ರೂ.603 ಗೆ ಅಡುಗೆ ಅನಿಲ (ಗ್ಯಾಸ್) ಪಡೆಯಬಹುದು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ 2 ಲಕ್ಷ 70 ಸಾವಿರ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಕೇಂದ್ರದ ಯೋಜನೆಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಭಾರತ ಆರ್ಥಿಕವಾಗಿ ಸಬಲವಾಗುತ್ತಿದೆ ಎಂದು ಅವರು ತಿಳಿಸಿದರು.
ಉಜ್ವಲ್ ಯೋಜನೆ, ಪೋಷಣ ಅಭಿಯಾನ, ಸ್ವ ಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ, ಆಯುಷ್ಮಾನ್ ಭಾರತ, ಕಿಸಾನ್ ಕ್ರೇಡಿಟ್ ಕಾರ್ಡ, ಮುದ್ರಾ, ಸ್ವನಿಧಿ, ಕಿಸಾನ್ ಸಮ್ಮಾನ ಮತ್ತು ಪ್ರಧಾನ ಮಂತ್ರಿಯವರ ಆವಾಸ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆಗಳ ಲಾಭ ಪಡೆದುಕೊಂಡ ನೂರಕ್ಕೂ ಅಧಿಕ ಸಂಖ್ಯೆಯ ಫಲಾನುಭವಿಗಳು ಭಾಗವಹಿಸಿದ್ದರು. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಶ್ರೀ ಸಂಕೇತ ತಂಡದವರು ಡ್ರೋನ್ ಪ್ರದರ್ಶನ ನೀಡಿದರು.
ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ತೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕರಾದ ಎಸ್.ಜಿ. ರವೀಂದ್ರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ಅಧ್ಯಕ್ಷರಾದ ಶ್ರೀಕಾಂತ ಭಂಡಿವಾಡ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕರಾದ ವಡ್ಡೆ ಶ್ರೀಹರಿ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರಾದ ಪ್ರಭುದೇವ, ಎಸ್.ಡಿ.ಎಂ.ಸಿಯ ಅಧ್ಯಕ್ಷರಾದ ಬಸವರಾಜ ಹಿರೇಮಠ, ವರೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮವ್ವ ಮ್ಯಾಗಡಿ, ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಧಾನಿಯವರೊಂದಿಗೆ ಸಂವಾದ ನಡೆಸಿದ ತುಮಕೂರಿನ ಮುಖೇಶ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆಯ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿದರು. ತುಮಕೂರಿನ ಮುಖೇಶ ಅವರು ಪ್ರಧಾನಮಂತ್ರಿ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ಮುದ್ರಾ ಯೋಜನೆಯಡಿ ರೂ. 4.50 ಲಕ್ಷ ಲೋನ್ ತೆಗೆದುಕೊಂಡು ಕೆಲಸ ಪ್ರಾರಂಭಿಸಿದ್ದೇನೆ. ಈಗ 3 ಜನರಿಗೆ ಉದ್ಯೋಗ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆಯಿರಿ, ಯುವ ಜನರಿಗೆ ಮತ್ತಷ್ಟು ಸಹಾಯ ಮಾಡುವಂತೆ ಆಗಿ ಎಂದು ಪ್ರಧಾನಿ ಮೋದಿ ಅವರು ಹಾರೈಸಿದರು.