ಬೆಂಗಳೂರು:– ಬಸನಗೌಡ ಪಾಟೀಲ್ ಯತ್ನಾಳ್ ಸಚಿವರಾಗಿದ್ದು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಎಂಬುದನ್ನು ಮರೆಯಬಾರದು ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಶಾಸಕ ಬಸನಗೌಡ ಪಾಟೀಲ್ ಅವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದು ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ. ಅವರಿಗೆ ಟಿಕೆಟ್ ಸಿಕ್ಕಿದ್ದು ಮರಳಿ ಪಕ್ಷಕ್ಕೆ ಬಂದಿದ್ದ ಯಡಿಯೂರಪ್ಪ ಅವರಿಂದ ಎನ್ನುವುದನ್ನು ಮರೆಯಬಾರದು. ಯತ್ನಾಳ್ ವರ್ತನೆ ಇದೇ ರೀತಿ ಮುಂದುವರೆದರೆ ನಮಗೂ ಮಾತನಾಡಲು ಬರುತ್ತದೆ. ದೆಹಲಿಗೆ ತೆರಳಲೂ ಬರುತ್ತದೆ ಎಂದು ಯಡಿಯೂರಪ್ಪ ಆಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಗೌರವ ಇದೆ. ಅವರು ಹಿರಿಯರು. ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದೆ ಎಂದು ಪದೇ ಪದೇ ಹೇಳುತ್ತಾರೆ. ಯಡಿಯೂರಪ್ಪ ಕೃಪಾಕಟಾಕ್ಷದಿಂದ ಅವರು ಸಚಿವರಾಗಿದ್ದರು. ಪಕ್ಷದಿಂದ ಉಚ್ಚಾಟನೆಯಾಗಿದ್ದಾಗ ಅವರ ಮರುಸೇರ್ಪಡೆಗೆ ಎಲ್ಲರೂ ವಿರೋಧ ಮಾಡಿದರೂ ಅವರ ಹಿರಿತನಕ್ಕೆ ಬೆಲೆ ಕೊಟ್ಟು ಯಡಿಯೂರಪ್ಪ ಯಾರ ಮಾತೂ ಕೇಳದೆ ಮರಳಿ ಕರೆತರುವ ದೃಢ ನಿರ್ಧಾರ ಮಾಡಿದ್ದರು. ಆದರೂ ಯಡಿಯೂರಪ್ಪ ವಿರುದ್ಧ ಅವರು ಯಾಕೆ ಈ ರೀತಿ ಮಾತನಾಡುತ್ತಾರೋ ಗೊತ್ತಿಲ್ಲ. ಅವರು ಇದೇ ರೀತಿ ಮಾತು ಮುಂದುವರೆಸಿದರೆ, ನಮಗೂ ದೆಹಲಿಗೆ ಹೋಗುವುದು ಗೊತ್ತಿದೆ. ನಮಗೂ ಮಾತನಾಡಲು ಬರುತ್ತದೆ ಎಂದರು.
ಸಂಘರ್ಷ ಯಾರ ವಿರುದ್ಧ ಮಾಡಬೇಕು? ಕಾಂಗ್ರೆಸ್ ವಿರುದ್ಧ ಮಾಡಬೇಕು. ಆಡಳಿತ ಪಕ್ಷದ ವಿರುದ್ಧ ಸಂಘರ್ಷ ಮಾಡಬೇಕು. ಆದರೆ ಪ್ರತಿದಿನ ಪಕ್ಷದ ರಾಜ್ಯದ ಅಧ್ಯಕ್ಷರ ಮೇಲೆ, ಯಡಿಯೂರಪ್ಪ ಮೇಲೆ ಸಂಘರ್ಷ ಮಾಡಿದರೆ ಇದು ಪಕ್ಷ ವಿರೋಧಿ ಚಟುವಟಿಕೆಯಾಗಲಿದೆ. ಈಗಲೂ ಅವರಿಗೆ ವಿನಂತಿ ಮಾಡುತ್ತೇನೆ. ಅವರು ಹಿರಿಯರು, ಅವರು ಪಕ್ಷ ಬಿಟ್ಟ ಸಂದರ್ಭದಲ್ಲಿ ಮತ್ತೆ ವಾಪಸ್ ಕರೆತಂದಿದ್ದು ಯಡಿಯೂರಪ್ಪ. ವಿಜಯಪುರದಲ್ಲಿ ಟಿಕೆಟ್ ಕೊಟ್ಟಿದ್ದು ಯಡಿಯೂರಪ್ಪ ಎಂದು ಮರೆಯಬಾರದು ಎಂದು ತಿಳಿಸಿದರು.