ಗದಗ:- ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗ್ತಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಲೋಕಸಭೆ ಚುನಾವಣೆ ಬಳಿಕ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಡಿಕೆ ಶಿವಕುಮಾರ್ ಮನೆಯಲ್ಲಿ ಸಿಬಿಐ ರೇಡ್ ಆದಾಗ ನೂರಾರು ಕೋಟಿ ರೂ. ಅಕ್ರಮ ದಾಖಲೆಗಳು ಸಿಕ್ತು. ವಿಚಾರಣೆ ಮುಗಿದು ಚಾರ್ಜಶಿಟ್ ಹಾಕುವಂಥ ಸಂದರ್ಭ ಇತ್ತು. ತಮ್ಮ ಕೈಯಲ್ಲಿ ಸರ್ಕಾರ ಇದೆ ಅಂತಾ ಹೈಕಮಾಂಡ್ ಒತ್ತಡಕ್ಕೆ ಒಳಗಾಗಿದ್ದರು ಎಂದಿದ್ದಾರೆ.
ಹೈಕಮಾಂಡ್ ಕೈಗೊಂಬೆಯಾಗಿ ಡಿಕೆ ಶಿವಕುಮಾರ್ ಮೇಲಿನ ಕೇಸನ್ನು ವಿತ್ ಡ್ರಾ ಮಾಡಿದರು. ತಾತ್ಕಾಲಿಕ ರಿಲೀಫ್ ಅಷ್ಟೇ ಸಿಕ್ಕಿದೆ. ಆದರೆ ಎಫ್ಐಆರ್ ವಿತ್ ಡ್ರಾ ಮಾಡಿಲ್ಲ. ಲೋಕಸಭೆ ಚುನಾವಣೆ ಬಳಿಕ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.
ಐಟಿ, ಇಡಿ, ಸಿಬಿಐ ಇವೆಲ್ಲ ಸ್ವಾಯತ್ತ ಸಂಸ್ಥೆಗಳು. ಹಾಗಾದರೆ ಕಾಂಗ್ರೆಸ್ನಲ್ಲಿದ್ದು ಎಷ್ಟು ಬೇಕಾದರೂ ಲೂಟಿ ಮಾಡಬಹುದಾ. ಯಾವುದೇ ಕಾರಣಕ್ಕೂ ಕಾಂಗ್ರೆಸ್ನವರನ್ನು ಮುಟ್ಟಬಾರದು ಅಂತ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಇಡೀ ದೇಶದಲ್ಲಿ ಸಿಬಿಐನವರು ಎಲ್ಲ ಪಕ್ಷದವರನ್ನ ಮುಟ್ಟಿದ್ದಾರೆ. ಸಾವಿರಾರು ಕೋಟಿ ರೂ. ಸಿಗುತ್ತಿರುವುದು ಕಾಂಗ್ರೆಸ್ನಲ್ಲಿ ಎಂದು ಕಿಡಿಕಾರಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಪಸ್ ಬಿಜೆಪಿಗೆ ಬರಬೇಕು ಎನ್ನುವ ಅಪೇಕ್ಷೆಯಿದೆ. ಜಗದೀಶ ಶೆಟ್ಟರ್ ನನ್ನ ಆತ್ಮೀಯ ಸ್ನೇಹಿತ. ಅವರಪ್ಪ ಕೂಡ ಬಿಜೆಪಿಯಲ್ಲಿದ್ದವರು. ಜನಸಂಘದಿಂದ ಕಾಲದಿಂದಲೂ ಬಂದವರು. ಹಿಂದುತ್ವದ ರಕ್ತ ಅವರ ಮೈಯಲ್ಲಿ ಹರಿಯುತ್ತಿದೆ. ಇನ್ನೇನು ಸ್ವಲ್ಪ ದಿನಕ್ಕೆ ನಮ್ಮ ಕಡೆಗೆ ಬರುತ್ತಾರೆ ಎಂದು ಹೇಳಿದ್ದಾರೆ.
ಕರ್ನಾಟದಲ್ಲಿ ಕಾಂಗ್ರೆಸ್ ಬಿಟ್ಟರೆ ದೇಶದಲ್ಲಿ ಎಲ್ಲಿದೆ. ಅಲ್ಲೊಂದು, ಇಲ್ಲೊಂದು, ಮತ್ತೊಂದು ಅಂತ ಹುಡುಕಬೇಕಷ್ಟೇ. ಕಾಂಗ್ರೆಸ್ ಹೋಗಿದ್ದಕ್ಕಾದರೂ ಶೆಟ್ಟರ್ ಕಾಂಗ್ರೆಸ್ ಪರವಾಗಿ ಮಾತನಾಡಬೇಕು. ಕಾಂಗ್ರೆಸ್ ಹೋಗಿರೋ ಶೆಟ್ಟರ ಬಿಜೆಪಿಯನ್ನ ಹೊಗಳೋಕಾಗುತ್ತಾ? ನನಗಂತೂ ಜಗದೀಶ ಶೆಟ್ಟರ್ ಬಿಜೆಪಿಗೆ ಬರುವ ಅಪೇಕ್ಷೆ ಇದೆ. ಅವರು ಬಂದರೆ ಬಹಳ ಸಂತೋಷ ಎಂದರು.
ಭೀಕರ ಬರ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನೂರು ರೂ. ಕೂಡ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಗದಗ ಡಿಸಿ ವೈಶಾಲಿ ಅವ್ರೇ ಹೇಳಿದ್ದಾರೆ. ಗದಗ ಡಿಸಿ ಜೊತೆ ನಾನು ಮಾತನಾಡಿದ್ದೇನೆ. ಬರ ಪರಿಹಾರ ಬಂದಿಲ್ಲ ಅಂತ ಹೇಳಿದ್ದಾರೆ. ಶಿವಮೊಗ್ಗಾ ತಾಲೂಕಿಗೂ ಕೇಳಿದ್ದೇನೆ ಅಲ್ಲೂ ಬಂದಿಲ್ಲ ಎಂದಿದ್ದಾರೆ.