ಬೆಂಗಳೂರು:- ರಾಜ್ಯದ ಕೇಸರಿ ಪಡೆಯಲ್ಲಿ ಸಂಭ್ರಮ ಹೆಚ್ಚಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಶನಿವಾರ ಪಕ್ಷದ ಕಚೇರಿಯವರೆಗೆ ತೆರೆದ ವಾಹನದಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.
ಗಜಗಾತ್ರದ ಕಿತ್ತಳೆ ಹಣ್ಣಿನ ಹಾರ ಹಾಕಿ, ಹೂಮಳೆಗೆರೆದು, ಪಟಾಕಿ ಸಿಡಿಸಿದ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸಿ ಸಂತಸದ ಹೊಳೆಯಲ್ಲಿ ಮಿಂದೆದ್ದರು.
ವಿಧಾನಸಭೆ ಚುನಾವಣೆಯಲ್ಲಿ ಸೋತು 6 ತಿಂಗಳ ಬಳಿಕ ಪಕ್ಷದ ರಾಜ್ಯ ಸಮಿತಿಗೆ ಹೊಸ ಸಾರಥಿಯಾಗಿ ವಿಜಯೇಂದ್ರ ನೇಮಕವಾದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ಹಿರಿಯ ಶಾಸಕ ಆರ್.ಅಶೋಕ್ ಆಯ್ಕೆಯಾಗಿದೆ. ಎರಡೂ ಪ್ರಮುಖ ಹುದ್ದೆಗಳ ಭರ್ತಿ ಯಿಂದಾಗಿ ಕಾರ್ಯಕರ್ತರು ಖುಷಿ ಹೆಚ್ಚಿಸಿದೆ ಎಂದು ಪಕ್ಷದ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ನಂತರ ಆರ್.ಅಶೋಕ್ಗೆ ಪಕ್ಷದ ಕಾರ್ಯ ಕರ್ತೆಯರು ಆರತಿ ಎತ್ತಿ, ಹೂಗುಚ್ಛ ನೀಡಿ ಕಚೇರಿ ಒಳಗೆ ಬರಮಾಡಿಕೊಂಡರು. ಭಾರತ ಮಾತೆ ಭಾವ ಚಿತ್ರಕ್ಕೆ ಪುಷ್ಪಾರ್ಚನೆ, ಜಗನ್ನಾಥರಾವ್ ಜೋಶಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಸಂಭ್ರಮೋತ್ಸವದಲ್ಲಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಬಿ.ವೈ.ವಿಜಯೇಂದ್ರ ಮಾತನಾಡಿ, ಇನ್ಮುಂದೆ ರಾಜ್ಯದಲ್ಲಿ ಜೋಡೆತ್ತಿನ ಹವಾ. ನಾನು, ಆರ್.ಅಶೋಕ್ ಜೋಡೆತ್ತಿನ ರೀತಿ ರಾಜ್ಯವನ್ನು ಸುತ್ತಲು ವರಿಷ್ಠರು ಅಪ್ಪಣೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಹುರುಪು ತುಂಬಿದರು.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾಗಿಲ್ಲ. ಪ್ರತಿಪಕ್ಷ ನಾಯಕನ ಆಯ್ಕೆಯಾಗಿಲ್ಲ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ನವರು ಈಗ ಕಂಗೆಟ್ಟಿದ್ದಾರೆ. ಪದೇಪದೆ ಟೀಕಿಸುವ ಬದಲು ಇನ್ನಷ್ಟು ದಿನ ಸುಮ್ಮನಿದ್ದರೆ ಚೆನ್ನಾಗಿತ್ತು ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎಂದರು.
ಜೋಡೆತ್ತು ಇಡೀ ರಾಜ್ಯವನ್ನು ಸುತ್ತಲಿದ್ದು, ಜನರಿಗೆ ನೆರವಾಗಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಹ್ಯಾಟ್ರಿಕ್ ಪ್ರಧಾನಿಯಾಗುವುದು ನಿಶ್ಚಿತ. ಈ ಚುನಾವಣೆ ದೇಶ, ರಾಜ್ಯ ರಾಜಕಾರಣದ ದಿಕ್ಸೂಚಿಯಾಗಲಿದೆ ಎಂದು ವಿಜಯೇಂದ್ರ ಭವಿಷ್ಯ ನುಡಿದರು.