ಬೆಂಗಳೂರು:- ವರ್ಗಾವಣೆ ದಂಧೆ ಮಾಡುತ್ತಿರುವ ಸಿಎಂ ಪುತ್ರ, ಶಾಸಕ ಡಾ.ಯತೀಂದ್ರರನ್ನು ತಕ್ಷಣ ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನರಲ್ ಪವರ್ ಆಫ್ ಅಟಾರ್ನಿ ಸರ್ಕಾರ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯರು ಅಧಿಕಾರ ಮಾಡುತ್ತಿಲ್ಲ. ಜಿಪಿಎ ಹೊಂದಿದ ಡಾ. ಯತೀಂದ್ರರು ಅಧಿಕಾರ ಮಾಡುತ್ತಿದ್ದಾರೆ. ಎಲ್ಲ ತೀರ್ಮಾನಗಳನ್ನು ಯತೀಂದ್ರರೇ ತೆಗೆದುಕೊಳ್ಳುತ್ತಾರೆ. ಕಾನೂನಿನಲ್ಲಿ ಇಂತಹ ವರ್ತನೆಗೆ ಅವಕಾಶ ಇಲ್ಲ ಎಂದರು.
ಪ್ರಮಾಣವಚನಕ್ಕೆ ವಿರುದ್ಧವಾಗಿ ಡಾ.ಯತೀಂದ್ರರಿಂದ ಅಧಿಕಾರ ನಡೆದಿದೆ. ಸಿದ್ದರಾಮಯ್ಯನವರು 25 ವರ್ಷಗಳ ಹಿಂದಿನ ವ್ಯಕ್ತಿ ಆಗಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತಾರೆ. ಪರಿವರ್ತಿತ ಸಿದ್ದರಾಮಯ್ಯ ಆಗಿದ್ದರೆ ಭಂಡತನದಿಂದ ಹೀಗೇ ನಡೆದುಕೊಳ್ಳುತ್ತಾರೆ ಎಂದು ದೂರಿದರು. ಇದೆಲ್ಲ ಕಾರಣಗಳಿಂದ ಸಿದ್ದರಾಮಯ್ಯನವರು ತಕ್ಷಣ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರ ವಿಡಿಯೋವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ರಾಜ್ಯದ ಜನರು ನೋಡುತ್ತಿದ್ದಾರೆ. ಈಗ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಿಂದೆ ವಿರೋಧ ಪಕ್ಷದಲ್ಲಿ ಇದ್ದಾಗ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಸೇರಿ ಎಲ್ಲ ಮುಖ್ಯಮಂತ್ರಿಗಳ ಕುಟುಂಬಗಳು ಭ್ರಷ್ಟಾಚಾರದಲ್ಲಿ ತೊಡಗಿದೆ. ಅವರ ಮಕ್ಕಳಿಂದ ಅಧಿಕಾರ ದುರುಪಯೋಗ ಆಗುತ್ತಿದೆ ಎಂದು ಅನೇಕ ಬಾರಿ ಹೇಳಿದ್ದರು ಎಂದು ವಿವರಿಸಿದರು.