ತಮ್ಮ ಮನೆಯ ನಾಯಿಯು ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ವಿಚಾರಣೆಗೆ ಹಾಜರಾದರು. ಪೊಲೀಸ್ ಕೇಳಿದ ಹಲವಾರು ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ಘಟನೆ ನಡೆದಾಗ ನಾನು ಗುಜರಾತ್ ನಲ್ಲಿ ಶೂಟಿಂಗ್ ನಲ್ಲಿದ್ದೆ. ಹುಡುಗರಿಗೆ ಕರೆಕ್ಟಾಗಿ ನೋಡಿಕೊಳ್ಳುವಂತೆ ಹೇಳಿದ್ದೆ. ಕೇರ್ ಟೇಕರ್ ಗೆ ಸರಿಯಾಗಿ ನೋಡಿಕೊಳ್ಳುವಂತೆ ಸೂಚನೆ ಕೊಟ್ಟಿದ್ದೆ’ ಎಂದು ತಿಳಿಸಿದ್ದಾರೆ.
‘ಸೆಲೆಬ್ರಿಟಿಗಳ ಮನೆ ಬಳಿ ಸಾಕಷ್ಟು ಜನ ಬರ್ತಿರ್ತಾರೆ. ಹೀಗಾಗಿ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ತೊಂದರೆಯಾಗುತ್ತೆ . ಯಾರೆ ಬಂದ್ರೂ ವಿಚಾರಿಸುವಂತೆ ನೋಡಿಕೊಳ್ಳುವಂತೆ ಹೇಳಿರುತ್ತೇನೆ. ಈ ಹಿನ್ನೆಲೆಯಲ್ಲಿ ಕಾರ್ ಪಾರ್ಕಿಂಗ್ ವಿಚಾರವಾಗಿ ಕೇಳಿದ್ದಾರೆ. ಎಚ್ಚರಿಕೆ ವಹಿಸಬೇಕಿತ್ತು ಅಂತಾ ಹುಡುಗರಿಗೆ ಹೇಳಿದ್ದೇನೆ. ಅಮಿತಾ ಜಿಂದಾಲ್ ಅವರಿಗೆ ಈ ರೀತಿಯಾದಾಗ ಅವರ ಆಸ್ಪತ್ರೆ ವೆಚ್ಚ ಭರಿಸುವಂತೆ ಹೇಳಿದ್ದೇನೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ’ ಎಂದು ಮಾತುಗಳನ್ನು ದರ್ಶನ್ ದಾಖಲಿಸಿದ್ದಾರೆ.
ಘಟನೆ ನಡೆದ ದಿನದಂದು ಸಿಸಿಟಿವಿ ವರ್ಕ್ ಆಗ್ತಿರಲಿಲ್ಲ. ಘಟನೆ ಆದ ಬಳಿಕ ಸಿಸಿಟಿವಿ ಮೈಂಟೇನ್ ಮಾಡುವಂತೆ ಹೇಳಿದ್ದೀನಿ ಎಂದೂ ಪೊಲೀಸರಿಗೆ ದರ್ಶನ್ ತಿಳಿಸಿದ್ದಾರೆ. ಸದ್ಯಕ್ಕೆ ಸಿಸಿಟಿವಿ ಫೂಟೇಜ್ ನೀಡುವಂತೆ ಪೊಲೀಸರು ತಿಳಿಸಿದ್ದು, ಸಿಸಿಟಿವಿ ಫೂಟೇಜ್ ಪಡೆದು ಮುಂದೆ ಚಾರ್ಜ್ ಶೀಟ್ ಹಾಕಲಿದ್ದಾರೆ ಎನ್ನುವ ಮಾಹಿತಿ ಇದೆ.
ಏನಿದು ಪ್ರಕರಣ?
ಈ ಹಿಂದೆ ದರ್ಶನ್ ವಿರುದ್ಧ ಆರ್ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿತ್ತು