ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ ಒಟ್ಟು 34,115 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. ಈ ಪೈಕಿ ಉತ್ತರ ಕರ್ನಾಟಕ ಭಾಗದಲ್ಲಿಯೇ 9,461 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ರಾಜ್ಯದ ಒಟ್ಟಾರೆ ಹೂಡಿಕೆಯಿಂದ 13,308 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಹೆಚ್ಚುವರಿ ರೂ 13,911 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವ ಫಾಕ್ಸ್ಕಾನ್ನ ಪ್ರಸ್ತಾವನೆಯನ್ನು ಸಮಿತಿಯು ಅನುಮೋದಿಸಿದೆ.
ಫಾಕ್ಸ್ಕಾನ್, ಈಗಾಗಲೇ ರಾಜ್ಯದಲ್ಲಿ ರೂ 8,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಅನುಮೋದನೆ ಪಡೆದಿದೆ. ಜೆಎಸ್ಡಬ್ಲ್ಯು ರಿನ್ಯೂ ಎನರ್ಜಿ ಫೋರ್ ಲಿಮಿಟೆಡ್ (ರೂ 4,960 ಕೋಟಿ ), ಜೆಎಸ್ಡಬ್ಲ್ಯು ಸ್ಟೀಲ್ ಲಿಮಿಟೆಡ್ (ರೂ 3,804 ಕೋಟಿ ), ಟೊಯೊಟಾ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ (ರೂ 3237.30 ಕೋಟಿ ), ಟಿಆರ್ಐಎಲ್ ಬೆಂಗಳೂರು ರಿಯಲ್ ಎಸ್ಟೇಟ್ ಸಿಕ್ಸ್ ಲಿಮಿಟೆಡ್ (ರೂ 3273 ಕೋಟಿ ಹೂಡಿಕೆ), ಜಾನಕಿ ಕಾರ್ಪ್ ಲಿಮಿಟೆಡ್ (ರೂ 607 ಕೋಟಿ ಮೊತ್ತದ ಹೆಚ್ಚುವರಿ ಹೂಡಿಕೆ) ಪ್ರಸ್ತಾವನೆಗಳು ’ಎಸ್ಎಚ್ಎಲ್ಸಿಸಿ’ ಅನುಮೋದನೆ ಪಡೆದಿರುವ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಲ್ಲಿ ಸೇರಿವೆ.
4 ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ
“ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 4 ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ಒಟ್ಟು ರೂ 9,461 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ. ಇವುಗಳಿಂದ ಈ ಪ್ರದೇಶದಲ್ಲಿ 3538 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರದ ಕಡೆಯಿಂದ ನಡೆಯುತ್ತಿರುವ ಇಂತಹ ಸಂಘಟಿತ ಪ್ರಯತ್ನಗಳು ’ಬೆಂಗಳೂರಿನ ಆಚೆ’ ಉಪಕ್ರಮದ ಭಾಗವಾಗಿವೆ” ಎಂದು ಮುಖ್ಯಮಂತ್ರಿಗಳ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.