ನವದೆಹಲಿ:- 25 ಕೋಟಿ ಜನ ಬಡತನದಿಂದ ಮುಕ್ತವಾಗಿದ್ದು, ಇಡೀ ವಿಶ್ವಕ್ಕೆ ಭಾರತದ ಮೇಲಿನ ವಿಶ್ವಾಸ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈಗ ಭಾರತದ ಸಮಯ ಬಂದಿದೆ. ಇಡೀ ವಿಶ್ವಕ್ಕೆ ಭಾರತದ ಮೇಲಿನ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೆಂದೂ ಭಾರತದ ಬಗ್ಗೆ ಇಂತಹ ಸಕಾರಾತ್ಮಕ ಭಾವನೆ ಇರಲಿಲ್ಲ ಎಂದು ಶ್ಲಾಘಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಭಾರತ ಹೇಗೆ ರೂಪಾಂತರಗೊಂಡಿದೆ ಎಂಬುದು ಪ್ರತಿಯೊಬ್ಬ ಅಭಿವೃದ್ಧಿ ತಜ್ಞರ ಗುಂಪಿನಲ್ಲಿ ಚರ್ಚೆಯಾಗುತ್ತಿದೆ. ಭಾರತದ ಶಕ್ತಿ ಸಾಮರ್ಥ್ಯದ ಬಗ್ಗೆ ಹಿಂದೆಂದೂ ಇಂತಹ ಸಕಾರಾತ್ಮಕ ಭಾವನೆ ಇರಲಿಲ್ಲ. ಆದ್ರೆ ನಮ್ಮ ಟೀಕಾಕಾರರು ಸಾರ್ವಕಾಲಿಕವಾಗಿ ಕೆಳಮಟ್ಟಕ್ಕಿಳಿಯುತ್ತಿದ್ದಾರೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಭಾರತದ ನಿರಂತರ ಬೆಳವಣಿಗೆಯಿಂದಾಗಿ ಹಣದುಬ್ಬರ ಕಡಿಮೆಯಾಗಿದೆ, ರಫ್ತಿನಲ್ಲಿ ಹೆಚ್ಚಳವಾಗಿದೆ. ಅವಕಾಶಗಳು ಮತ್ತು ಆದಾಯ ಎರಡೂ ಹೆಚ್ಚಾಗುತ್ತಿವೆ. ಮುಖ್ಯವಾಗಿ ದೇಶದಲ್ಲಿ ಬಡತನ ಕಡಿಮೆಯಾಗುತ್ತಿದೆ ಎಂದು ಒತ್ತಿ ಹೇಳಿದ್ದಾರೆ
ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ. ಇದು ನಮ್ಮ ಸರ್ಕಾರದ ನೀತಿಗಳು ಸರಿಯಾಗಿವೆ ಮತ್ತು ಸರ್ಕಾರ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಏಕೆಂದರೆ ನಮ್ಮ ಆಡಳಿತ ಮಾದರಿಯು ಏಕಕಾಲದಲ್ಲಿ ಎರಡು ವೇದಿಕೆಗಳಲ್ಲಿ ಮುನ್ನಡೆಯುತ್ತಿದೆ. ಒಂದೆಡೆ ನಾವು 20ನೇ ಶತಮಾನದಿಂದ ನಮಗೆ ಬಂದಿರುವ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಮತ್ತೊಂದು ಕಡೆ 21ನೇ ಶತಮಾನದ ಆಶಯಗಳನ್ನು ಈಡೇರಿಸುವಲ್ಲಿ ನಿರತರಾಗಿದ್ದೇವೆ. ದೊಡ್ಡ ಸವಾಲುಗಳನ್ನು ಮೆಟ್ಟಿ ನಿಲ್ಲುವ ಜೊತೆ ಜೊತೆಗೆ ದೊಡ್ಡ ದೊಡ್ಡ ಗುರಿಗಳನ್ನು ಸಾಧಿಸುತ್ತಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನ ಕೊಂಡಾಡಿದ್ದಾರೆ.