ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ಎತ್ತಿನ ಗಾಡಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿದೆ. ಅಲ್ಲದೇ ಎತ್ತಿನ ಗಾಡಿಯಯಲ್ಲಿದ್ದ ರೈತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಬಾಗಲಕೋಟೆ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಎತ್ತುಗಳು ಕೆಳಗೆ ಬಿದ್ದು ರಕ್ತ ಸೋರಿ, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿವೆ. ಎತ್ತಿನ ಗಾಡಿಯಲ್ಲಿದ್ದ ರೈತ ತೀವ್ರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತನ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ
ಗಾಯಗೊಂಡ ರೈತ ಮಂಜುನಾಥ್ ಆರ್. ವಗ್ಗೇನವರ್ (40) ಎಂಬುದಾಗಿ ತಿಳಿದು ಬಂದಿದೆ. ಮಂಗಳವಾರ ರಾತ್ರಿ ಮಂಜುನಾಥ್ ಕೆರೆಸೂರು ಗ್ರಾಮದ ತನ್ನ ಕೃಷಿ ಭೂಮಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಎತ್ತಿನ ಗಾಡಿಗೆ ಡಿಕ್ಕಿ ಹೊಡೆದಾಗ ಬಸ್ ಚಾಲಕ ರೀಲ್ ತಯಾರಿಸುತ್ತಿದ್ದ. ತಂಬಾಕು ತಿನ್ನುತ್ತಿದ್ದ. ಹಾಗಾಗಿ ಚಾಲಕನಿಗೆ ತನ್ನ ಮುಂದೆ ಇದ್ದ ಗಾಡಿಯನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ