ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇಂದು ದರ್ಶನ್ ಅವರ ಪೊಲೀಸ್ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ. ಈ ಮಧ್ಯೆ ಸ್ಯಾಂಡಲ್ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ.
ಯೆಸ್. ನಿರ್ಮಾಪಕರು ನಟ ದರ್ಶನ್ ಮೇಲೆ 150 ಕೋಟಿ ಹೂಡಿಕೆ ಮಾಡಿದ್ದಾರೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಟ ದರ್ಶನ್ ಜೊತೆಗೆ 20 ವರ್ಷಗಳಿಂದ ಜರ್ನಿ ಮಾಡುತ್ತಿದ್ದೇನೆ, ಅವರು ತುಂಬ ಒಳ್ಳೇ ವ್ಯಕ್ತಿ. ನಮ್ ಹಳ್ಳಿ ಕಡೆ ಸಹವಾಸದಿಂದ ಸನ್ಯಾಸಿ ಕೆಟ್ಟ ಅನ್ನೋ ಮಾತಿದೆ. ದರ್ಶನ್ ಅವರ ಸುತ್ತ ಇದ್ದಾರಲ್ಲ, ಅವರಿಂದ ಇವತ್ತು ಹೀಗೆ ಆಗಿದೆ ಅಷ್ಟೇ. ಎಷ್ಟೋ ಸಲ ಅವರ ತೋಟಕ್ಕೆ ಹೋಗಿ ಅವರ ಜೊತೆಗೆ ಊಟ ಮಾಡಿದ್ದೇನೆ, ಅವರ ಮನೆಗೂ ಹೋಗಿದ್ದೇನೆ. ದರ್ಶನ್ ಅವರದ್ದು ತುಂಬ ಒಳ್ಳೆಯ ಹೃದಯ. 20 ವರ್ಷದ ಒಡನಾಟ ಇರುವ ನನಗೆ ಅದು ಗೊತ್ತು. ಆದರೆ ಇವತ್ತು ಆಗಿರುವ ಈ ಘಟನೆ ನೋಡಿದಾಗ, ಜೊತೆಗಾರರಿಂದ ಏನೋ ಮೋಸ ನಡೆದಿದೆ ಎಂದು ನನಗೆ ಅನ್ನಿಸುತ್ತಿದೆ” ಎಂದಿದ್ದಾರೆ.
“ಒಳ್ಳೆಯ ಮನಸ್ಸಿರುವ ದರ್ಶನ್ 90 ದಿನ ಆದ್ಮೇಲೆ ಆಚೆ ಬಂದೇ ಬರ್ತಾರೆ ನೋಡ್ತಿರಿ. ಸಿನಿಮಾ ಶೂಟಿಂಗೂ ಮಾಡ್ತಾರೆ. ನನ್ನ ಬಳಿ ದರ್ಶನ್ ಅವರ ಸಿನಿಮಾದ ಡೇಟ್ ಇದೆ. ನಾನು ಅವರೊಂದಿಗೆ ಸಿನಿಮಾ ಮಾಡಬೇಕಿದೆ. ಕನ್ನಡ ಸಿನಿಮಾಗಳು, ಕನ್ನಡ ಕಲಾವಿದರನ್ನು ಮೇಲೆತ್ತಬೇಕು ಎಂಬುದೇ ನಮ್ಮ ಆಸೆ, ಬೀಳಿಸಬೇಕು ಅಂತ ನಾವು ಎಂದೂ ಅಂದುಕೊಂಡವರಲ್ಲ. ನಮ್ಮ ಸಿನಿಮಾ ನಿರ್ಮಾಪಕರು ಅವರ ಮೇಲೆ ಹೆಚ್ಚು ಕಮ್ಮಿ 150 ಕೋಟಿ ರೂ. ಇನ್ವೆಸ್ಟ್ ಮಾಡಿದ್ದಾರೆ. ಕಾನೂನು ಪ್ರಕಾರವೇ ಅವರನ್ನು ಆಚೆಗೆ ಕರೆದುಕೊಂಡು ಬರುತ್ತೇವೆ. ಆ ನಿರ್ಮಾಪಕರಿಗೆಲ್ಲಾ ಅನ್ಯಾಯ ಆಗಬಾರದು. ದರ್ಶನ್ ಬಂದೇ ಬರ್ತಾರೆ ಅಂತ ನಾನು ನಂಬಿದ್ದೇನೆ” ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
“ದರ್ಶನ್ ಅವರು ಹೊರಗೆ ಬಂದಮೇಲೆ ಈ ಸಹವಾಸಗಳನ್ನೆಲ್ಲಾ ಬಿಡಬೇಕು. ಮನೆಯಲ್ಲಿ ದೇವರ ಪೂಜೆ ಮಾಡಿಕೊಂಡು, ಶೂಟಿಂಗ್ ಇದ್ದಾಗ ಬಂದು ಆರಾಮಾಗಿ ಇರಬೇಕು. ಅಕ್ಕ-ಪಕ್ಕ ಇರೋರು ಒಳ್ಳೆಯ ಬುದ್ಧಿ ಮಾತುಗಳನ್ನು ಹೇಳಬೇಕು. ಅವರು ಕುಡಿದಾಗ ಕಂಟ್ರೋಲ್ಗೆ ಸಿಗಲ್ಲ ಅಂತಾರೆ. ಆ ರೀತಿ ಏನೂ ಇಲ್ಲ. ಅವರು ನಾರ್ಮಲ್ ಆಗಿಯೇ ಇರುತ್ತಾರೆ. 8-9 ತಿಂಗಳ ಹಿಂದೆ ದರ್ಶನ್ ಮನೆಗೆ ನಾನು ಹೋಗಿದ್ದೆ. ನನ್ನ ‘ಭರ್ಜರಿ’ ಸಿನಿಮಾಗೆ ಅವರೇ ವಾಯ್ಸ್ ಕೊಟ್ಟಿದ್ದಾರೆ” ಎಂದು ಕನಕಪುರ ಶ್ರೀನಿವಾಸ್ ಅವರು ತಿಳಿಸಿದ್ದಾರೆ.