ಚೆನ್ನೈ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಸಕಲ ಸಿದ್ಧತೆಗಳು ನಡೆಯುವ ಮೂಲಕ ಒಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಂತೆಯೇ ಈ ಹಬ್ಬಕ್ಕೆ ಸಾಕ್ಷಿಯಾಗಲು ಹಲವಾರು ಕಡೆಗಳಿಂದ ಭಕ್ತಿಪೂರ್ವಕ ಕಾಣಿಕೆಗಳನ್ನು ಕಳುಹಿಸಲಾಗುತ್ತಿದೆ. ಅಂತೆಯೇ ತಮಿಳುನಾಡಿನಿಂದ ಕೂಡ ಭಕ್ತಿಯ ಸಂಕೇತವಾಗಿ ಘಂಟೆಗಳನ್ನು ರವಾನಿಸಲಾಗಿದೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ramamandir) ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದೀಗ ತಮಿಳುನಾಡಿನಿಂದ ಅಯೋಧ್ಯೆಗೆ 1,200 ಕೆಜಿ ತೂಕದ ಒಟ್ಟು 42 ಘಂಟೆಗಳನ್ನು ರವಾನಿಸಲಾಗಿದೆ. ನಾಮಕ್ಕಲ್ ಜಿಲ್ಲೆಯಲ್ಲಿ ಘಂಟೆಗಳನ್ನು ತಯಾರಿಸಲಾಗಿದೆ. ಬಳಿಕ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ರಾಮಜನ್ಮಭೂಮಿಗೆ ಕಳುಹಿಸಿಕೊಡಲಾಗಿದೆ.
ಈ ಸಂಬಂಧ ಆಂಡಾಲ್ ಮೋಲ್ಡಿಂಗ್ ವರ್ಕ್ಸ್ ಮಾಲೀಕ ಆರ್.ರಾಜೇಂದ್ರನ್ ಮಾತನಾಡಿ, ಒಂದು ಘಂಟೆ ಮಾಡಲು 1,200 ರೂ. ಆಗುತ್ತದೆ. ಆದರೆ ರಾಮಮಂದಿರಕ್ಕೆ ಕೇವಲ 600 ರೂ.ಗಳನ್ನು ಕಾರ್ಮಿಕ ಶುಲ್ಕವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಘಂಟೆಗಳ ತೂಕವು ಬದಲಾಗುತ್ತದೆ. ಐದು ಘಂಟೆಗಳು ತಲಾ 120 ಕೆ.ಜಿ ತೂಗಿದರೆ, ಆರು ಘಂಟೆಗಳು ತಲಾ 70 ಕೆ.ಜಿ ತೂಗುತ್ತವೆ. ಆದರೆ ಒಂದು ಘಂಟೆ ಮಾತ್ರ 25 ಕೆ.ಜಿ ತೂಗುತ್ತದೆ ಎಂದು ಅವರು ವಿವರಿಸಿದ್ದಾರೆ.