ಬೆಂಗಳೂರು: ಸರಕಾರದ ಆದೇಶದಂತೆ ಅನರ್ಹರ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಪಡಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ಆದಾಯ ತೆರಿಗೆ ಪಾವತಿ ಮಾಡುತ್ತಿರುವ 2086 ಕುಟುಂಬಗಳು, ಸರ್ಕಾರಿ ನೌಕರರು ಹೊಂದಿರುವ 391, ರೂ. 1.20 ಲಕ್ಷಕ್ಕಿಂತ ಹೆಚ್ಚಿನ ಕುಟುಂಬದ ಆದಾಯ ಹೊಂದಿರುವ 29,615 ಹೀಗೆ 32,092 ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವುದು ತಂತ್ರಾಂಶದ ಮೂಲಕ ಪತ್ತೆಹಚ್ಚಿ ಪರಿಶೀಲನೆ ನಡೆಸಲಾಗುತ್ತಿದೆ.
ಹೌದು, ರಾಜ್ಯ ಸರ್ಕಾರವು ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಅಭಿಮಾನ ಆರಂಭಿಸಿದೆ. ಇದರಲ್ಲಿ ವಾರ್ಷಿಕ 1.20 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಕುಟುಂಬಗಳಿಗೆ ಸಿಮೀತವಾದ ಪಡಿತರ ಚೀಟಿಯನ್ನು ಶ್ರೀಮಂತರು, ಉಳ್ಳವರು ಪಡೆದಿದ್ದಾರೆ. ಈ ಕುರಿತು ಅಭಿಮಾನದ ಮೂಲಕ ಪತ್ತೆ ಕಾರ್ಯ ಆರಂಭಿಸಿದೆ.
ಅಧಿಕ ಆದಾಯ ಇರುವ ಒಟ್ಟು 32,092 ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇದರಲ್ಲಿ 391 ಮಂದಿ ಸರ್ಕಾರಿ ಉದ್ಯೋಗ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಗಳಿಸುವ 2000ಕ್ಕೂ ಹೆಚ್ಚು ಕುಟುಂಬಗಳಿವೆ. ನಿಗದಿತ ಆದಾಯ (1.20ಕ್ಕೂ) ಹೆಚ್ಚು ವಾರ್ಷಿಕ ವರಮಾನ ಹೊಂದಿರುವ 29000 ಕುಟುಂಬಗಳ ಪತ್ತೆ ಆಗಿವೆ.
ಆರು ತಿಂಗಳಿಂದ ಪಡಿತರ ಪಡೆಯದ 19,969 ಚೀಟಿಗಳನ್ನು ರದ್ದು ಮಾಡಲಾಗಿದ್ದು, ನಕಲಿ ದಾಖಲೆ ನೀಡಿ ಆದ್ಯತಾ ಪಡಿತರ ಚೀಟಿ ಪಡೆದವರಿಂದ 1.89 ಕೋಟಿ ರೂ. ದಂಡ ಕೂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ” ಜಿಲ್ಲೆಯಲ್ಲಿ 557 ಅಂತ್ಯೋದಯ, 19,412 ಆದ್ಯತಾ ಪಡಿತರ ಚೀಟಿ ಸೇರಿ ಒಟ್ಟು 19,969 ಪಡಿತರ ಚೀಟಿದಾರರು 6 ತಿಂಗಳಿಂದ ಪಡಿತರ ಧಾನ್ಯ ಪಡೆದಿಲ್ಲ. ಹೀಗಾಗಿ, ಈ ಎಲ್ಲಪಡಿತರ ಚೀಟಿಗಳನ್ನು 2024ರ ಜುಲೈ 29ರಂದು ರದ್ದುಪಡಿಸಲಾಗಿದೆ”, ಎಂದು ಮಾಹಿತಿ ನೀಡಿದ್ದಾರೆ.
”ಅಲ್ಲದೆ, ಸರಕಾರಿ ನೌಕರರು ಹಾಗೂ ಅನರ್ಹರು ಹೊಂದಿರುವ ಒಟ್ಟು 45,804 ಆದ್ಯತಾ ಪಡಿತರ ಚೀಟಿಗಳನ್ನು ‘ಆದ್ಯತೇತರ’ ಎಂದು ಪರಿವರ್ತಿಸಲಾಗಿದೆ. ಇಷ್ಟು ದಿನ ಆದ್ಯತಾ ಪಡಿತರ ಚೀಟಿ ಲಾಭ ಪಡೆದ ಕಾರಣ ಆ ಎಲ್ಲ ಪಡಿತರ ಚೀಟಿದಾರರಿಂದ ಒಟ್ಟು 1,88,75,946 ರೂ. ದಂಡ ವಸೂಲಿ ಮಾಡಲಾಗಿದೆ.
ಮೃತರ ಹೆಸರು ತೆರವು
11,117 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರು, 1,421 ಆದ್ಯತೇತರ ಪಡಿತರ ಚೀಟಿದಾರರು ಸೇರಿ ಒಟ್ಟು 12,538 ಫಲಾನುಭವಿಗಳು ಮೃತಪಟ್ಟಿದ್ದು, ಅವರ ವಿವರವನ್ನು ಕುಟುಂಬ ದತ್ತಾಂಶದಿಂದ ತೆಗೆಯಲಾಗಿದೆ”, ಎಂದು ಡಿಸಿ ತಿಳಿಸಿದ್ದಾರೆ.
ಯಾರೆಲ್ಲಾ ಬಿಪಿಎಲ್ ಕಾರ್ಡ್ ಅನರ್ಹರು?
- ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ಸರ್ಕಾರಿ ನೌಕರರು. ಅಂದರೆ ಸರ್ಕಾರದ ಅಥವಾ ಸಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.
- ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು.
- ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
- ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.
- ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.