ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಲ್ಲಾ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಟೀಮ್ ಇಂಡಿಯಾ ಮಾಜಿ ಚೀಫ್ ಸೆಲೆಕ್ಟರ್ ಮತ್ತು ಮಾಜಿ ವೇಗಿ ಚೇತನ್ ಶರ್ಮಾ ಗುಣಗಾನ ಮಾಡಿದ್ದಾರೆ.
ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೋಲಿಲ್ಲದ ಸರದಾರನಂತೆ ಫೈನಲ್ಗೆ ದಾಪುಗಾಲಿಟ್ಟಿತ್ತು. ಆದರೆ, ನವೆಂಬರ್ 19ರಂದು ನಡೆದ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ವೈಫಲ್ಯ ಕಂಡು ರನ್ನರ್ಸ್ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತು.
“ತಂಡದ ಸಲುವಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿರುವ ಕೆಲವೇ ಆಟಗಾರರ ಪೈಕಿ ರೋಹಿತ್ ಶರ್ಮಾ ಒಬ್ಬರು. ತಂಡದ ಸಲುವಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ವೈಯಕ್ತಿಕ ಗುರಿ ಸಾಧನೆ ಬಿಟ್ಟು ತಂಡಕ್ಕಾಗಿ ಆಡುವ ಆಟಗಾರ. ಮುಂಚೂಣಿಯಲ್ಲಿ ನಿಂತು ಜವಾಬ್ದಾರಿಯೊಂದಿಗೆ ತಂಡವನ್ನು ಈವರೆಗೆ ಮುನ್ನಡೆಸಿದ್ದಾರೆ. ಒಡಿಐನಲ್ಲಿ ಆರಂಭಿಕ ಬ್ಯಾಟರ್ಗಳು ಮೊದಲ 10 ಓವರ್ಗಳಲ್ಲಿ 80 ರನ್ ತಂದುಕೊಟ್ಟಾಗ ಉಳಿದ ಬ್ಯಾಟರ್ಗಳು ತಂಡದ ಮೊತ್ತವನ್ನು 300ರ ಗಡಿ ದಾಟಿಸಬಹುದು. ವಿಶ್ವಕಪ್ ಫೈನಲ್ನಲ್ಲಿ ಅದು ಸಾಧ್ಯವಾಗಲಿಲ್ಲ,” ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ.
2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 500ಕ್ಕೂ ಹೆಚ್ಚು ರನ್ ಕಲೆಹಾಕಿದರು. ಇದರಲ್ಲಿ ಒಂದು ಶತಕ ಕೂಡ ಸೇರಿತ್ತು. ಆದರೆ, ಭಾರತಕ್ಕೆ ಒಡಿಐ ವಿಶ್ವಕಪ್ ಗೆದ್ದುಕೊಡುವ ಅವರ ಕನಸು ನನಸಾಗಲಿಲ್ಲ. 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಅವರು 650ಕ್ಕೂ ಹೆಚ್ಚು ರನ್ ಬಾರಿಸಿದರೂ ತಂಡ ಸೆಮಿಫೈನಲ್ನಲ್ಲಿ ಮುಗ್ಗರಿಸಿತ್ತು.
ಇಂಗ್ಲೆಂಡ್ ಎದುರು ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ 28 ರನ್ಗಳ ಸೋಲುಂಡಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಭಾರಿ ಟೀಕೆಗಳು ಕೇಳಿಬಂದಿವೆ. ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್, ಒಂದು ವೇಳೆ ವಿರಾಟ್ ಕೊಹ್ಲಿ ನಾಯಕ ಆಗಿದ್ದರೆ ಟೀಮ್ ಇಂಡಿಯಾ ಹೈದರಾಬಾದ್ ಟೆಸ್ಟ್ ಸೋಲುತ್ತಿರಲಿಲ್ಲ ಎಂದಿದ್ದಾರೆ.