ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ರೌಂಡ್ ರಾಬಿನ್ ಹಂತದಲ್ಲಿ ಸೋತು ಹೊರಬಿದ್ದ ಶ್ರೀಲಂಕಾ ತಂಡಕ್ಕೆ ದೊಡ್ಡ ಆಘಾತವೇ ಎದುರಾಯಿತು. ಮೊದಲಿಗೆ ಶ್ರೀಲಂಕಾ ಸರಕಾರ ತನ್ನ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿ, ಕ್ರಿಕೆಟ್ ನಿರ್ವಹಣೆ ಸಲುವಾಗಿ ಮಧ್ಯಂತರ ಸಮಿತಿಯ ರಚನೆ ಮಾಡಿತು. ಬಳಿಕ ಕ್ರಿಕೆಟ್ ಮಂಡಳಿಯಲ್ಲಿ ಸರಕಾರದ ಹಸ್ತಕ್ಷೇಪ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶ್ರೀಲಂಕಾ ತಂಡದ ವಿರುದ್ಧ ನಿಷೇಧ ಹೇರಿತು
ಶ್ರೀಲಂಕಾ ಕ್ರಿಕೆಟ್ನ ಮಧ್ಯಂತರ ಸಮಿತಿ ಮುಖ್ಯಸ್ಥ ಕೂಡ ಆಗಿರುವ ಅರ್ಜುನ ರಣತುಂಗ, ಬಿಸಿಸಿಐ ಕಾರ್ಯದರ್ಶಿ ಮತ್ತು ಕ್ರಿಕೆಟ್ ಶ್ರೀಲಂಕಾದ ಅಧಿಕಾರಿಗಳ ನಡುವೆ ಇದ್ದ ಒಳ ಒಪ್ಪಂದದ ಕಾರಣವೇ ದೇಶದಲ್ಲಿ ಕ್ರಿಕೆಟ್ ಇಷ್ಟು ಹೀನಾಯ ಸ್ಥಿತಿಗೆ ತಲುಪಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಯ ಶಾ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
“ಜಯ ಶಾ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿನ ಅಧಿಕಾರಗಳ ನಡುವಣ ಒಳ ನಂಟಿನಿಂದ, ಬಿಸಿಸಿಐ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸಂಪೂರ್ಣ ನಿಯಂತ್ರಣ ತನ್ನ ಕೈಲಿರಿಸಿಕೊಂಡಿದೆ. ತನ್ನ ಕೈಗೊಂಬೆಯಂತೆ ಕುಣಿಸುತ್ತಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಎಲ್ಲ ನಿರ್ಧಾರಗಳ ಮೇಲೆ ಜಯ ಶಾ ಅವರ ಪ್ರಭಾವ ಇದೆ. ಜಯ ಶಾ ತಮ್ಮ ತಂದೆ ಭಾರತ ಸರಕಾರದ ಕೇಂದ್ರ ಗೃಹ ಮಂತ್ರಿ ಆಗಿರುವುದರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರ ಬಳಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ತಮ್ಮ ಕೈಗೊಂಬೆಯನ್ನಾಗಿಸಿಕೊಂಡಿದ್ದಾರೆ,” ಎಂದು ರಣತುಂಗ ದೊಡ್ಡ ಹೇಳಿಕೆ ನೀಡಿದ್ದಾರೆ.