ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಸೋಲು ಈಗಲೂ ಕಾಡುತ್ತಿದೆ ಎಂದು ಟೀಮ್ ಇಂಡಿಯಾದ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ 4 ದಿನಗಳ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನೋವು ಹಂಚಿಕೊಂಡಿದ್ದಾರೆ. ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 6 ವಿಕೆಟ್ಗಳಿಂದ ಸೋತಿತ್ತು. ಆ ಮೂಲಕ ಮೂರನೇ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲು ಆಟಗಾರರಲ್ಲದೆ ಅಭಿಮಾನಿಗಳನ್ನು ಕೂಡ ಸುದೀರ್ಘ ಕಾಲದವರೆಗೆ ಕಾಡಲಿದೆ.
ಟೀಮ್ ಇಂಡಿಯಾದ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೈನಲ್ ಪಂದ್ಯಕ್ಕೆ ಸಂಬಂಧಿಸಿದ 3 ಫೋಟೋಗಳು ಹಾಗೂ ಒಡೆದ ಹೃದಯದ ಎಮೋಜಿ ಹಾಕುವ ಮೂಲಕ ಫೈನಲ್ ಪಂದ್ಯದ ಸೋಲಿನಿಂದ “ಇನ್ನೂ ನೋವಿದೆ” ಎಂದು ಬರೆದುಕೊಂಡಿದ್ದಾರೆ.
2023ರ ಏಕದಿನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಆದರೆ, ತಮ್ಮ ನಿಧಾನಗತಿಯ ಆಟದಿಂದ ಅನೇಕ ಕ್ರಿಕೆಟ್ ಪಂಡಿತರ ಟೀಕೆಗಳಿಗೆ ಗುರಿಯಾಗಿದ್ದರು. ಅಂದಿನ ಪಂದ್ಯದಲ್ಲಿ 107 ಎಸೆತ ಎದುರಿಸಿದ್ದ ರಾಹುಲ್, 49 ಡಾಟ್ ಬಾಲ್ ಆಡಿದ್ದರಲ್ಲದೆ 52 ಸಿಂಗಲ್ ರನ್ ಹಾಗೂ 5 ಬಾರಿ ಎರಡು ರನ್ ಕದಿಯುವ ಮೂಲಕ 66 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ (54 ರನ್) ಕೂಡ ಅರ್ಧಶತಕ ಗಳಿಸಿದ್ದರು.