ತುಳಸಿ ಗಿಡವನ್ನು ಅತ್ಯಂತ ಪವಿತ್ರ ಗಿಡವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡ ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದ ಗಿಡ ಕೂಡ. ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೋ ಆ ಮನೆ ಸಂತೋಷ, ಸಮೃದ್ಧಿ ಹೊಂದುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಬಹುತೇಕ ಮನೆಗಳಲ್ಲಿ ತುಳಸಿ ಗಿಡ ಇರುತ್ತದೆ. ಬೆಳಿಗ್ಗೆ ಬೆಳಿಗ್ಗೆ ತುಳಸಿ ಗಿಡಕ್ಕೆ ಸುತ್ತು ಬಂದು ತುಳಸಿ ಪೂಜಿಸುವುದು ಸಂಪ್ರದಾಯವೇ ಆಗಿದೆ.
ಬಹುತೇಕ ಎಲ್ಲ ಹಿಂದೂಗಳು ತುಳಸಿ ಗಿಡವನ್ನು ಪೂಜಿಸುತ್ತಾರೆ ಮತ್ತು ಅದು ನಾಶವಾಗದಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ತುಳಸಿ ಗಿಡ ಒಣಗುವುದಾಗಲೀ, ಸಾಯುವುದಾಗಲೀ ಅಶುಭವೆನಿಸಿದೆ. ನೀವು ಸಾಕಷ್ಟು ಕಾಳಜಿ ಮಾಡುತ್ತಿದ್ದರೂ ತುಳಸಿ ಗಿಡ ಒಣಗುತ್ತಿದೆ ಎಂದರೆ ಅದಕ್ಕೆ ನಿಮ್ಮ ಈ ಕೆಲವು ತಪ್ಪುಗಳು ಕಾರಣವಾಗಿರಬಹುದು.
ತುಳಸಿ ಗಿಡ ಒಣಗುವುದು ನಿಮ್ಮ ಯಾವ ತಪ್ಪುಗಳ ಸೂಚನೆಯಾಗಿದೆ? ತುಳಸಿಯ ವಿಷಯದಲ್ಲಿ ವಹಿಸಬೇಕಾದ ಎಚ್ಚರಿಕೆಗಳೇನು? ತುಳಸಿಯನ್ನು ಹೇಗೆಲ್ಲ ನಿಮ್ಮ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಬಹುದು ನೋಡೋಣ.
- ತುಳಸಿ ಗಿಡವನ್ನು ಕುಂಡದಲ್ಲಿ ಹಾಕಿದರೆ ಅಷ್ಟು ಬೆಳವಣಿಗೆ ಆಗುವುದಿಲ್ಲ, ಬೇರು ಬಿಡುವುದಕ್ಕೆ ಸ್ಥಳಾವಕಾಶ ಕಮ್ಮಿ ಇರುತ್ತೆ. ಹಾಗಿದ್ದೂ ಕೊಂಚ ಅಗಲವಾದ ಕುಂಡ ಬಳಸಿ.
- ತುಳಸೀ ಗಿಡವನ್ನು ಸ್ನಾನ ಮಾಡದೇ ಮುಟ್ಟುವುದು ತಪ್ಪು. ಹಾಗೆ ಮಾಡಿದಾಗ ಲಕ್ಷ್ಮಿಗೆ ಕೋಪ ಬರುತ್ತದೆ. ಇದಲ್ಲದೆ, ಮೈಲಿಗೆ ಇರುವಾಗ ತುಳಸಿ ಬಿಡಿಸುವುದರಿಂದ ಕೂಡಾ ಗಿಡ ಬೇಗ ಒಣಗುವುದು.
- ತುಳಸಿಯನ್ನು ಉಗುರಿನಿಂದ ಕೀಳುವುದು ಸರಿಯಲ್ಲ. ಅಥವಾ ಮಧ್ಯಾಹ್ನ ಊಟದ ನಂತರ ಗಿಡವನ್ನು ಪೂಜಿಸುವುದು ಕೂಡಾ ಅದನ್ನು ಅವಮಾನಿಸಿದಂತೆ. ಇಂಥ ಸಂದರ್ಭದಲ್ಲಿ ಕೂಡಾ ತುಳಸಿ ಬೇಗ ಒಣಗುತ್ತದೆ.
- ಅಶುಚಿಯಾದ, ಮಡಿಯಿಲ್ಲದ ನೀರನ್ನು ಗಿಡದ ಬುಡಕ್ಕೆ ಹಾಕುವುದರಿಂದ ಕೂಡಾ ತುಳಸಿಯು ಕೋಪಗೊಳ್ಳುತ್ತಾಳೆ. ಆಗಲೂ ಗಿಡ ಒಣಗುವುದು.
- ತುಳಸೀ ಗಿಡಕ್ಕೆ ಗಿಡ ಬೆಳೆದ ಹಾಗೆಲ್ಲ ಬೇರೆ ಮಣ್ಣ(soil)ನ್ನು ಹಾಕುತ್ತಿರಬೇಕು, ಇಲ್ಲದಿದ್ದರೆ ಫಲವತ್ತತೆ ಇಲ್ಲದೇ ಬೇಗ ಒಣಗುವುದು.
- ತುಳಸಿ ಗಿಡ ಪದೇ ಪದೆ ಒಣಗುತ್ತಿದ್ದರೆ ಮೃತ್ತಿಕೆಯನ್ನು ತಂದು ತುಳಸೀ ಬುಡದಲ್ಲಿ ಹಾಕಿ. ಆಗ ಚೆನ್ನಾಗಿ ಬೆಳೆಯುವುದು.
- ಮನೆಯ ಮೇಲೆ ದುಷ್ಟಗ್ರಹದ ಪ್ರಭಾವ ಬಿದ್ದಾಗ, ವಾಸ್ತು ದೋಷ(Vastu dosha)ಗಳು ಹೆಚ್ಚಿದ್ದಾಗ, ಯಾರಾದರೂ ನಿಮ್ಮ ಮೇಲೆ, ಮನೆಯ ಮೇಲೆ ಮಾಟ ಮಂತ್ರ ಮಾಡಿಸಿದ್ದಾಗ ಕೂಡಾ ತುಳಸಿ ಗಿಡ ಒಣಗುವ ಮೂಲಕ ಅದನ್ನು ತೋರಿಸಿಕೊಡುತ್ತದೆ. ಎಚ್ಚರಿಸುತ್ತದೆ. ಈ ಮೂಲಕ ಕೆಲವೊಂದು ಅಹಿತಕರ ಸನ್ನಿವೇಶದಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ ತುಳಸಿ.
- ಪ್ರತಿ ದಿನ ತುಳಸಿ ಎಲೆಗಳನ್ನು ಅಥವಾ ಬೀಜಗಳನ್ನು ನೀರಿಗೆ ಹಾಕಿ ಕುಡಿಯುವುದರಿಂದ ಮಾಟ ಮಂತ್ರದ ಪರಿಣಾಮ ತಟ್ಟುವುದಿಲ್ಲ.
- ತುಳಸಿ ಗಿಡದ ಮುಂದೆ ಪ್ರತಿ ದಿನ ದೀಪ(Lamp) ಹಚ್ಚುವುದರಿಂದ ದುಷ್ಟಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ, ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಕ್ಷ್ಮೀಕಟಾಕ್ಷವಾಗುತ್ತದೆ.
- ತುಳಸೀ ಪೂಜೆಯನ್ನು ಪೂರ್ವ(east) ಅಥವಾ ಉತ್ತರಾಭಿಮುಖವಾಗಿ ಕುಳಿತು ಮಾಡುವುದು ಶುಭ, ಉತ್ತರ ಅಥವಾ ಈಶಾನ್ಯ ಅಭಿಮುಖವಾಗಿ ಮಾಡುವುದು ಅತ್ಯಂತ ಶುಭವಾಗಿದೆ. ಪೂಜೆಗೆ ಕುಳಿತುಕೊಳ್ಳುವಾಗ ಇದನ್ನು ನೆನಪಿಡಿ.
- ಪ್ರತಿ ಬಾರಿ ತುಳಸಿ ಎಲೆ ಬಿಡಿಸುವಾಗ ವಿಷ್ಣು ಪರಮಾತ್ಮರ ಕ್ಷಮೆ ಕೋರಿ, ಗಿಡವನ್ನು ಅಲ್ಲಾಡಿಸಿ, ಒಣಗಿದ ಎಲೆಯಲ್ಲಾ ಉದುರಿದ ನಂತರ ತುಳಸಿಯನ್ನು ಕೊಯ್ಯಬೇಕು.
- ನೀವು ತುಳಸೀ ಬಿಡಿಸುವಾಗ ತುಳಸಿಯು ಅಪ್ಪಿ ತಪ್ಪಿ ನೆಲಕ್ಕೆ ಬಿದ್ದರೆ ‘ಬ್ರಹ್ಮಹತ್ಯಾ’ ದೋಷ ಬರುವುದು..
- ನೆಲಕ್ಕೆ ಬಿದ್ದ ತುಳಸಿಯನ್ನು ಪೂಜೆಗೆ ಬಳಸಬಾರದು.