ನಮ್ಮ ನಾಡು ಹಲವಾರು ಜನಪದ ಕಲೆಗಳ ಇತಿಹಾಸ ಹೊಂದಿದೆ. ಇತ್ತೀಚೆಗೆ ಕಾಂತಾರ ಚಿತ್ರದಲ್ಲಿ ಕರಾವಳಿ ಭಾಗದ ದೈವಾರಾಧನೆ, ಆಚರಣೆ ಬಗ್ಗೆ ಹೇಳಲಾಗಿತ್ತು. ಅದೇರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ವೀರಗಾಸೆ ಕಲೆ ಹಾಗೂ ಅದರ ಅಧಿದೇವರಾದ ವೀರಭದ್ರ ದೇವರ ಇತಿಹಾಸವನ್ನು ಹೇಳುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ. ಅದರ ಹೆಸರು ರುದ್ರಾಭಿಷೇಕಂ.
ವೀರಗಾಸೆ ಕುಟುಂಬವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಆ ಕಲೆಯ ಮೂಲ, ಆ ಕಲಾವಿದರ ಇತಿಹಾಸವನ್ನು ಕಮರ್ಷಿಯಲ್ ಕಥೆಯ ಮೂಲಕ ನಿರ್ದೇಶಕ ವಸಂತ್ ಕುಮಾರ್ ಅವರು ರುದ್ರಾಭಿಷೇಕಂ ಚಿತ್ರದಲ್ಲಿ ಹೇಳಹೊರಟಿದ್ದಾರೆ. ಚಿಕ್ಕಬಳ್ಳಾಪುರದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಹಾಗೂ ದೇವನಹಳ್ಳಿಯ ಚಿಕ್ಕತದಮಂಗಲ ಗ್ರಾಮದಲ್ಲಿ ಸೆಟ್ ಹಾಕಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ವೀರಗಾಸೆ ಕಲಾವಿದರನ್ನಿಟ್ಟುಕೊಂಡು ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ.
ತಂದೆ, ಮಗನಾಗಿ ದ್ವಿಪಾತ್ರದಲ್ಲಿ ನಟಿಸಿರುವ ವಿಜಯ ರಾಘವೇಂದ್ರ ಇದೇ ಮೊದಲ ಬಾರಿಗೆ ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ದೇವನಹಳ್ಳಿ ಸುತ್ತಮುತ್ತ ಹಾಗೂ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ, ಈವರೆಗೆ ಯಾರೂ ಶೂಟ್ ಮಾಡದಂಥ ಲೊಕೇಶನ್ ನಲ್ಲಿ 2 ಹಾಡುಗಳನ್ನು ಚಿತ್ರೀಕರಿಸಲಾಗಿದೆ.
ನಮ್ಮ ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ವೀರಗಾಸೆ ಕಲೆಯ ಮಹತ್ವ, ಇತಿಹಾಸವನ್ನು ಈ ಚಿತ್ರದಲ್ಲಿ ಹೇಳಲಾಗಿದೆ.ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ರುದ್ರಾಭಿಷೇಕಂ ಚಿತ್ರ ಹೇಳುತ್ತದೆ. ಮಂಜುನಾಥ ಕೆ.ಎನ್, ಜಯರಾಮ್ ರೆಡ್ಡಿ, ಕೆ.ವೆಂಕಟೇಶ್, ಚಿದಾನಂದ ಮೂರ್ತಿ, ಸುರೇಶ್ ಬಾಬು, ಅಶ್ವಥ್ ನಾರಾಯಣ, ಶಿವಕುಮಾರ್, ರವಿಕುಮಾರ್ ಸೇರಿ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರುದ್ರಾಭಿಷೇಕಂ ಚಿತ್ರದಲ್ಲಿ ಬಲ ರಾಜವಾಡಿ ಅವರು ಊರ ಗೌಡನಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.