ಬೆಂಗಳೂರು:- ಯೂನಿವರ್ಸಿಟಿ ಮುಚ್ಚುವ ಬದಲು ಕಾಂಗ್ರೆಸ್ ಪಕ್ಷವನ್ನೇ ಮುಚ್ಚಿ ಬಿಡಿ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಮುಚ್ಚಿಬಿಟ್ಟರೆ ದೇಶಕ್ಕೇನೂ ಆಗುವುದಿಲ್ಲ. ಕಾಂಗ್ರೆಸ್ ಇರುವವರೆಗೆ ಈ ದೇಶಕ್ಕೆ ಅಭಿವೃದ್ಧಿ, ನೆಮ್ಮದಿ ಇಲ್ಲ. ಆ ಪಕ್ಷ ದೇಶಕ್ಕೆ ಗಂಡಾಂತರ ತರುವ ಕೆಲಸ ಮಾಡುತ್ತಿದೆ. ಕಾರ್ಯಕರ್ತರಿಗೆ ಖಜಾನೆ ಹಣವನ್ನು ಕೊಡಲು ನಾವು ಬಿಡುವುದಿಲ್ಲ. ಇದನ್ನು ಸಂವಿಧಾನದ ಅಡಿಯಲ್ಲಿ ಕೊಡ್ತಾ ಇದ್ದೀರಾ? ಇದನ್ನು ಕೂಡಲೇ ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
ಗ್ಯಾರಂಟಿ ಅನುಷ್ಠಾನ ಸಮಿತಿಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕವಾಗಿವೆ. ಸಂವಿಧಾನದಂತೆ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ. ಅವು ಸಾಂವಿಧಾನಿಕ ಹುದ್ದೆಗಳಲ್ಲ. ಆದ್ದರಿಂದ ಕೈಬಿಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ಸಿನವರು ಖಜಾನೆಗೆ ಕನ್ನ ಹಾಕುತ್ತಿದ್ದಾರೆ. ಪ್ರತಿಯೊಂದು ವಿಷಯಕ್ಕೆ ಕೇಳಿದರೂ ಹಣ ಇಲ್ಲ ಎನ್ನುತ್ತೀರಿ. ಅಂಗನವಾಡಿ ಕಾರ್ಯಕರ್ತರಿಗೆ ಹಣ ಕೊಡುತ್ತಿಲ್ಲ; 9 ಯುನಿವರ್ಸಿಟಿ ಮುಚ್ಚುತ್ತಿದ್ದಾರೆ. ಕಾರ್ಯಕರ್ತರನ್ನು ಕಾಪಾಡಲು ಕಾಂಗ್ರೆಸ್ಸಿನಲ್ಲಿ ಹಣ ಇಲ್ಲವಾದರೆ, ಖಜಾನೆಗೆ ಕನ್ನ ಹಾಕುವುದಲ್ಲ; ಯೂನಿವರ್ಸಿಟಿ ಮುಚ್ಚುವುದು ಸರಿಯಲ್ಲ. ದುಡ್ಡಿಲ್ಲ ಎಂದಾದರೆ ಕಾಂಗ್ರೆಸ್ ಕಚೇರಿಯನ್ನೇ ಮುಚ್ಚಿ ಬಿಡಿ ಎಂದು ಕಿಡಿಕಾರಿದ್ದಾರೆ.