ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಸೇರಿದಂತೆ ರಾಜ್ಯದಲ್ಲಿನ 11 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಕ್ರಮದಿಂದ ರಾಜ್ಯ ಸರಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ, ತೀವ್ರ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿದ್ದ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರಕಾರ ಹಿಂಪಡೆಯುತ್ತಿರುವುದು ಸಾಮಾಜಿಕ ಹಾಗೂ ಕಾನೂನಿಗೆ ಭಂಗ ತರುವ ಕೆಲಸ.
ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಸಮಾಜಘಾತುಕ ಶಕ್ತಿಗಳಾಗಿದ್ದು, ಅವರ ಮೇಲಿನ ಪ್ರಕರಣಗಳನ್ನು ಕೈ ಬಿಡುವುದರಿಂದ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸರಕಾರ ರಾಜೀ ಮಾಡಿಕೊಂಡಂತೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. 2022 ಏಪ್ರಿಲ್ 16 ರಂದು ಹಳೇಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸುವ ಜತೆಗೆ ಹತ್ಯೆ ಯತ್ನ ನಡೆದಿದೆ. ಈ ವೇಳೆ ಪೊಲೀಸರು ಒಟ್ಟು 146 ವ್ಯಕ್ತಿಗಳನ್ನು ಬಂಧಿಸಿದ್ದರು.

whatsappನಲ್ಲಿರುವ ಸ್ಕ್ರೀನ್ ಶೇರಿಂಗ್ ಫೀಚರ್ ಬಗ್ಗೆ ನಿಮಗೆ ಗೊತ್ತಿದೆಯಾ: ಇಲ್ಲಿದೆ ಮಾಹಿತಿ!
ಈ ಪೈಕಿ 6 ಜನರಿಗೆ ಮಾತ್ರ ಜಾಮೀನು ದೊರೆತಿದ್ದು, ಉಳಿದವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿದೆ. ಹೀಗಿರುವಾಗ ಪ್ರಕರಣವನ್ನು ಹಿಂಪಡೆಯಲು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಸುತ್ತೋಲೆ ಹೊರಡಿಸಿರುವುದು ಎಷ್ಟು ಸರಿ? ಸರಕಾರದ ತುಷ್ಟೀಕರಣ ಧೋರಣೆ ಇದರಿಂದ ಸ್ಪಷ್ಟವಾಗುತ್ತದೆ. ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಗಲಭೆಗಳು ಜಾಸ್ತಿಯಾಗಿರುವುದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.

