ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದು, ನ್ಯಾಯಾಲಯದ ಮುಂದಿನ ನಡೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ.
Uttarakhand: ಶಾಲಾ ಶಿಕ್ಷಕನಿಂದಲೇ ಬೆತ್ತೆಲೆ ಫೋಟೋ ಕಳಿಸಿ ವಿದ್ಯಾರ್ಥಿನಿಗೆ ಕಿರುಕುಳ.!
ನ್ಯಾಯಾಲಯಕ್ಕೆ ಇಂದು ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಅದನ್ನು ನ್ಯಾಯಾಧೀಶರ ಅವಗಾಹನೆಗೆ ನೀಡಲಾಗಿರುತ್ತದೆ. ಸೆಪ್ಟೆಂಬರ್ 9 ರಂದು ಅಥವಾ ಅದಕ್ಕೆ ಮುಂಚಿತವಾಗಿ ನ್ಯಾಯಾಧೀಶರು ಆರೋಪ ಪಟ್ಟಿಗೆ ಸಹಿ ಹಾಕಿದ ಬಳಿಕ ಆ ಆರೋಪ ಪಟ್ಟಿಯ ಪ್ರತಿಯನ್ನು ಆರೋಪಿಗಳಿಗೆ ಅಥವಾ ಅವರ ಪರ ವಕೀಲರಿಗೆ ನೀಡಲಾಗುತ್ತದೆ. ಈಗಿರುವ ಮಾಹಿತಿಯಂತೆ ಸೆಪ್ಟೆಂಬರ್ 10 ರ ಬಳಿಕವಷ್ಟೆ ಆರೋಪ ಪಟ್ಟಿ ಸಾರ್ವಜನಿಕ ದಾಖಲೆಯಾಗಿ ಬದಲಾಗುತ್ತದೆ. ಅಲ್ಲಿಯವರೆಗೆ ಅದು ನ್ಯಾಯಾಲಯದ ದಾಖಲೆಯಾಗಿಯೇ ಉಳಿಯಲಿದೆ.
ಆರೋಪಿಗಳ ಪರ ವಕೀಲರಿಗೆ ಆರೋಪ ಪಟ್ಟಿ ಪ್ರತಿ ನೀಡಿದ ಒಂದು ವಾರದ ಬಳಿಕ ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಜೊತೆಗೆ ಆರೋಪಿಗಳಿಗೆ ಸಮನ್ಸ್ ಸಹ ನೀಡಲಾಗಿರುತ್ತದೆ. ನ್ಯಾಯಾಲಯವು ಆರೋಪಗಳನ್ನು ನಿಗದಿಪಡಿಸಿ ಸಾಕ್ಷ್ಯಗಳ ವಿಚಾರಣೆ ಆರಂಭ ಮಾಡುತ್ತದೆ. ಆ ಮೂಲಕ ಪ್ರಕರಣದ ‘ಅಸಲಿ ವಿಚಾರಣೆ’ ಪ್ರಾರಂಭವಾಗುತ್ತದೆ.
ಇನ್ನು ಆರೋಪಿಗಳ ಪರ ವಕೀಲರುಗಳು ಆರೋಪ ಪಟ್ಟಿಯ ಪ್ರತಿ ಪಡೆದು ಅದನ್ನು ಅಧ್ಯಯನ ನಡೆಸುತ್ತಾರೆ. ವಾರದ ಬಳಿಕ ವಿಚಾರಣೆ ವೇಳೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶಗಳಿರುತ್ತವೆ. ಕೆಲವರ ಆರೋಪಿ ಸಂಖ್ಯೆ ಬದಲಾವಣೆ, ಎಫ್ಐಆರ್ ರದ್ದು ಇನ್ನಿತರೆ ಅರ್ಜಿಗಳನ್ನು ಅಥವಾ ವಾದ ಮಂಡನೆಯನ್ನು ಮಾಡಬಹುದಾಗಿರುತ್ತದೆ.
ಚಾರ್ಜ್ ಶೀಟ್ ಸಲ್ಲಿಸಿದ ಒಂದು ವಾರದ ಬಳಿಕ ಕೆಲವು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಆರೋಪ ಪಟ್ಟಿ ಸಲ್ಲಿಕೆ ಆದ ಬಳಿಕ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಪವಿತ್ರಾ ಗೌಡ, ಕೇಶವಮೂರ್ತಿ, ವಿನಯ್, ಅನುಕುಮಾರ್ ಅವರುಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಆದರೆ ಅವರ ಅರ್ಜಿಗಳನ್ನು ತಳ್ಳಿಹಾಕಲಾಗಿತ್ತು. ಆದರೆ ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ಪೊಲೀಸರ ತನಿಖೆ ಮುಗಿದಿರುತ್ತದೆಯಾದ್ದರಿಂದ ಈ ಸಮಯದಲ್ಲಿ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ಪ್ರಕರಣದಲ್ಲಿ ಪ್ರಮುಖ ಅಲ್ಲದ ಆರೋಪಿಗಳು ಕೆಲವರಿಗೆ ಜಾಮೀನು ಸಿಗುವ ಸಾಧ್ಯತೆಯೂ ಇದೆ. ನಟ ದರ್ಶನ್ ಪರ ವಕೀಲರು ಸಹ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.