ಕೆ.ಆರ್.ಪೇಟೆ: ಕೃಷ್ಣರಾಜಪೇಟೆ ತಾಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿ ಅಪಾಯ ಮಟ್ಟವನ್ನು ಮೀರಿ ಉಕ್ಕಿ ಹರಿಯುತ್ತಿದೆ. ಗೊರೂರು ಜಲಾಶಯದಿಂದ ಹೇಮಾವತಿ ನದಿಗೆ 90 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಯ ಬಿಟ್ಟಿರುವುದರಿಂದ ಕೃಷ್ಣರಾಜಪೇಟೆ ತಾಲೂಕಿನಲ್ಲಿ ಹೇಮಾವತಿ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ.ಗದ್ದೆ ಹೊಸೂರು ಗ್ರಾಮ, ಮಂದಗೆರೆ, ಚಿಕ್ಕಮಂದಗೆರೆ, ಶ್ರವಣೂರು, ಕುಪ್ಪಹಳ್ಳಿ, ಬಂಡಿಹೊಳೆ ಗ್ರಾಮಗಳ ತಗ್ಗು ಪಾತ್ರಗಳಲ್ಲಿ ಹೇಮಾವತಿ ನದಿಯ ನೀರು ತುಂಬಿದೆ.
ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದ ತಪ್ಪಲಿನ ಪಾದದ ಬಳಿಗೆ ಹೇಮಾವತಿ ನದಿಯ ನೀರು ಆವರಿಸಿದ್ದು, ಮಧ್ಯಾಹ್ನದ ವೇಳೆಗೆ ಇನ್ನೂ ಕೂಡ ನದಿಗೆ ಹೆಚ್ಚುವರಿಯಾಗಿ 30,000 ಕ್ಯೂಸೆಕ್ಸ್ ನೀರನ್ನು ಹರಿಯ ಬಿಡುವ ಸಾಧ್ಯತೆ ಇರುವುದರಿಂದ ರಘು ಪಾತ್ರಗಳಲ್ಲಿ ವಾಸ ಮಾಡುತ್ತಿರುವ ಜನರು ಹಾಗೂ ಗ್ರಾಮಸ್ಥರು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ನದಿಗೆ ಅನವಶ್ಯಕವಾಗಿ ಹೋಗಬಾರದು ಎಂದು ಹೇಮಾವತಿ ಜಲಾಶಯ ಯೋಜನೆಯ ಕಾರ್ಯ ಪಾಲಕ ಇಂಜಿನಿಯರ್ ಆನಂದ್ ಮನವಿ ಮಾಡಿದ್ದಾರೆ.