ಬೆಂಗಳೂರು:- ವಿಪಕ್ಷ ನಾಯಕ ಆರ್ ಅಶೋಕ್ ಅವರು ಸರ್ಕಾರಿ ನಿವಾಸಕ್ಕೆ ಮನವಿ ಮಾಡಿದ್ದು, ಡಿಕೆ ಶಿವಕುಮಾರ್ಗೆ ಹಂಚಿಕೆಯಾಗಿರುವ ನಿವಾಸಕ್ಕೇ ಬೇಡಿಕೆ ಇಟ್ಟಿದ್ದಾರೆ.
ಅಶೋಕ ಅವರು ವಿಧಾನಸಭೆ ವಿಪಕ್ಷ ನಾಯಕರಾಗಿ ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ನಿರ್ದಿಷ್ಟ ಮೂರು ಸರ್ಕಾರಿ ಬಂಗಲೆ ಕೇಳಿರುವ ಅಶೋಕ, ಡಿಸಿಎಂ ಮತ್ತು ಇಬ್ಬರು ಸಚಿವರಿಗೆ ಈಗಾಗಲೇ ಹಂಚಿಕೆಯಾಗಿರುವ ಮನೆಗಳಿಗೇ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ ಮನವಿ ಮಾಡಿದ್ದಾರೆ. ಆದರೆ, ಸದ್ಯ ಈ ನಿವಾಸ ಡಿಸಿಎಂ ಡಿಕೆ ಶಿವಕುಮಾರ್ಗೆ ಹಂಚಿಕೆಯಾಗಿದೆ. ಇದೇ ನಿವಾಸದಲ್ಲಿದ್ದು ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ನಲ್ಲಿ ನಂಬರ್ 1 ಮತ್ತು ನಂಬರ್ 3 ನಿವಾಸಕ್ಕೆ ಕೂಡಾ ಅಶೋಕ್ ಬೇಡಿಕೆ ಇಟ್ಟಿದ್ದಾರೆ. ಸದ್ಯ ರೇಸ್ ವ್ಯೂ ಕಾಟೇಜ್ನ ನಂಬರ್ 1 ನಿವಾಸ ಸಚಿವ ಎಂಬಿ ಪಾಟೀಲ್ಗೆ ಹಂಚಿಕೆಯಾಗಿದೆ. ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆಯಾಗಿದೆ.
ಜಯಮಹಲ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ಆಯ್ದುಕೊಳ್ಳುವಂತೆ ವಿಪಕ್ಷ ನಾಯಕರಿಗೆ ಸರ್ಕಾರ ಸಲಹೆ ನೀಡಿದೆ. ಆದರೆ, ಅದಕ್ಕೆ ಒಪ್ಪದ ಅಶೋಕ ನಿರ್ದಿಷ್ಟ ಮೂರು ಬಂಗಲೆಗಳ ಪೈಕಿ ಒಂದು ಬಂಗಲೆಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.