ನಮ್ಮ ಮೆಟ್ರೋದಿಂದಾಗಿ ಸಾಕಷ್ಟು ಜನ ನಿಟ್ಟುಸಿರು ಬಿಟ್ಟಿದ್ದಾರೆ. ಟ್ರಾಫಿಕ್ ಜಂಜಾಟವಿಲ್ಲದೆ ಬೇಗನೆ ತಾವು ಅಂದುಕೊಂಡ ಸ್ಥಳ ತಲುಪಬಹುದಾಗಿದೆ. ಇಂದು ಸಾಕಷ್ಟು ಮಂದಿ ತಮ್ಮ ಖಾಸಗಿ ವಾಹನ ಬಿಟ್ಟು ಮೆಟ್ರೋ ಹತ್ತುತ್ತಿದ್ದಾರೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಬಹು ನಿರೀಕ್ಷಿತ ಹಸಿರು ಮಾರ್ಗದಲ್ಲಿರುವ ನಾಗಸಂದ್ರದಿಂದ ಮಾದಾವರ ನಡುವಿನ ಮಾರ್ಗದ ವಾಣಿಜ್ಯ ಸಂಚಾರಕ್ಕೆ ಬಿಎಂಆರ್ಸಿಎಲ್ ಸಿದ್ದತೆ ಆರಂಭಿಸಿದೆ.
ಈಗಾಗಲೇ ಸಿವಿಲ್ ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿ ಮುಕ್ತಾಯಗೊಂಡಿದ್ದು, ಇದೇ ವಾರದೊಳಗೆ ಟ್ರಯಲ್ ರನ್ ಆರಂಭಿಸುವ ಸಾಧ್ಯತೆ ಇದೆ. 3.7 ಕಿ.ಮೀ ಉದ್ದದ ವಿಸ್ತರಣಾ ಮಾರ್ಗವನ್ನು 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
45 ದಿನಗಳ ಕಾಲ ಟ್ರಯಲ್ ರನ್ ನಡೆಯಲಿದ್ದು, ಟ್ರಯಲ್ ರನ್ ಯಶಸ್ವಿಯಾದ ಬಳಿಕ ಸೇಫ್ಟಿ ಕಮಿಷನ್ಗೂ ಅಂತಿಮ ಹಂತದ ಪರೀಕ್ಷೆ ನಡೆಯಲಿದೆ. ಸೇಫ್ಟಿ ಟೇಸ್ಟಿಂಗ್ ಯಶಸ್ವಿಯಾಗಿ ಮುಕ್ತಾಯವಾದರೆ ಅಕ್ಟೋಬರ್, ನವೆಂಬರ್ ವೇಳೆಗೆ ಸಂಚಾರಕ್ಕೆ ಅನುಮತಿ ಸಿಗುವ ಸಾಧ್ಯತೆಯಿದೆ.
ನಿಗದಿಯಾದ ಪರೀಕ್ಷೆಗಳು ಸರಿಯಾದ ಸಮಯಕ್ಕೆ ನಡೆದು ಅಡೆತಡೆಗಳು ನಿವಾರಣೆಯಾದರೆ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಕೊಂಚ ಕಡಿಮೆಯಾಗಲಿದೆ.