ಐಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ಕೊಟ್ಟಿದೆ. ಇನ್ಮುಂದೆ ಕರ್ನಾಟಕದಲ್ಲೇ ಐಫೋನ್ ಮೊಬೈಲ್ ಗಳು ತಯಾರಾಗಲಿದೆ.
ಹೌದು, ಆ್ಯಪಲ್ ಐಫೋನ್ ಸ್ಮಾರ್ಟ್ಫೋನ್ಗಳನ್ನು ತಯಾರಿಸುವ ಅತಿದೊಡ್ಡ ಘಟಕವು ಕರ್ನಾಟಕ ರಾಜ್ಯದಲ್ಲಿ ಆರಂಭವಾಗಲಿದೆ. ಈ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಿಟ್ವೀಟ್ ಮಾಡಿ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ಒಂದು ಲಕ್ಷ ಉದ್ಯೋಗ ಸೃಷ್ಟಿ
ಶೀಘ್ರದಲ್ಲೇ ಕರ್ನಾಟಕದಲ್ಲಿ ಆ್ಯಪಲ್ ತಯಾರಿಕಾ ಘಟಕ ಪ್ರಾರಂಭವಾಗಲಿದೆ. ಇದರಿಂದ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯ ಜೊತೆಗೆ ರಾಜ್ಯದಲ್ಲಿ ಸಾಕಷ್ಟು ಅವಕಾಶಗಳು ತೆರೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನೇತೃತ್ವದಲ್ಲಿ 5 ಟ್ರಿಲಿಯನ್ ಆರ್ಥಿಕತೆಗೆ ರಾಜ್ಯ ಸರ್ಕಾರ ಕೂಡ ಪಾಲು ನೀಡಲಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
300 ಎಕರೆಯಲ್ಲಿ ಘಟಕ ಪ್ರಾರಂಭವಾಗುತ್ತಿದ್ದು, ಈ ಒಂದೇ ಘಟಕದಲ್ಲಿ 60 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯುತ್ತದೆ. ಈ ಪೈಕಿ ಕನ್ನಡಿಗರಿಗೆ ಎಷ್ಟು ಉದ್ಯೋಗ ಸಿಗಲಿದೆ ಎಂದು ಮಾತ್ರ ತಿಳಿದುಬಂದಿಲ್ಲ.
ಬೆಂಗಳೂರಿನ ಸಮೀಪವೇ ಐಫೋನ್ ತಯಾರಿಕಾ ಘಟಕ
ದೇಶದಲ್ಲ್ಲಿ ಐಫೋನ್ ಸ್ಮಾರ್ಟ್ಫೋನ್ಗಳನ್ನು ತಯಾರಿಸುವ ಅತಿದೊಡ್ಡ ಘಟಕವು ಬೆಂಗಳೂರು ನಗರದ ಸಮೀಪದಲ್ಲೇ ಪ್ರಾರಂಭವಾಗಲಿದೆ. ಬೆಂಗಳೂರು ಹೊರವಲಯದ ಹೊಸೂರಿನಲ್ಲಿ ಘಟಕ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಹೊಸೂರು ತಮಿಳುನಾಡಿಗೆ ಹೊಂದಿಕೊಂಡಂತೆ ಇದ್ದು, ಆ್ಯಪಲ್ ಐಫೋನ್ಗಳ ತಯಾರಿಕೆಗಾಗಿ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಹೊರಗುತ್ತಿಗೆ ಪಡೆದುಕೊಂಡಿದೆ. ಶೀಘ್ರದಲ್ಲೇ ಇಲ್ಲಿ ಐಫೋನ್ ತಯಾರಾಗಲಿದೆ.
ಟಾಟಾ ಸಮೂಹಕ್ಕೆ ಘಟಕ?
ಮಾಹಿತಿಯಂತೆ ಬೆಂಗಳೂರಿನಲ್ಲಿ ಆ್ಯಪಲ್ ಇಂಕ್ನ ಐಫೋನ್ ಅನ್ನು ತಯಾರಿಸಲಾಗುತ್ತದೆ. ಇಲ್ಲಿ ತಯಾರಿಸುವ ತೈವಾನ್ನ ತೈಪೆಯಿಯ ವಿಸ್ಟ್ರಾನ್ ಕಂಪನಿಯ ಘಟಕವನ್ನು ಖರೀದಿಸಲು ಟಾಟಾ ಸಮೂಹ ಮುಂದಾಗಿದೆ. ಈಗಾಗಲೇ, ಒಪ್ಪಂದ ಬಹುತೇಕ ಅಂತಿಮಗೊಂಡಿದೆ. ಮಾರ್ಚ್ ಅಂತ್ಯದ ವೇಳೆಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
