ಮೇಕೆದಾಟು ಯೋಜನೆ ಜಾರಿಯಾದರೆ ಎರಡೂವರೆ ಕೋಟಿ ಕನ್ನಡಿಗರಿಗೆ ಅನುಕೂಲವಾಗಲಿ ಎಂದು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆಯಿಂದ ರಾಜ್ಯದಲ್ಲಿ ಜನರು ಜಾಗೃತರಾಗುತ್ತಾರೆಂದು ಹೆದರಿ ನಾನೂ ಸೇರಿದಂತೆ ನಮ್ಮ ಪಕ್ಷದ 30 ಜನರ ಮೇಲೆ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ತಡೆಗಟ್ಟುವುದೇ ಸರ್ಕಾರದ ಉದ್ದೇಶವಾಗಿದಿದ್ದರೆ. ನೂರಾರು ಜನ ಸೇರಿಸಿ ನಿನ್ನೆ ಪ್ರತಿಭಟನೆ ನಡೆಸಿದ ಸುಭಾಷ್ ಗುತ್ತೇದಾರ್, ರೇಣುಕಾಚಾರ್ಯ ಮೇಲೂ ಕೇಸು ದಾಖಲಾಗಬೇಕಿತ್ತು ಅಲ್ಲವೇ? ನಮ್ಮ ಮೇಲೆ ಮಾತ್ರ ಸರ್ಕಾರ ಕಾನೂನು ಕ್ರಮವನ್ನು ಯಾಕೆ ತೆಗೆದುಕೊಂಡಿದೆ.
ನಮ್ಮ ಮೇಲೆ ಇನ್ನು ಎಷ್ಟು ಕೇಸು ದಾಖಲೀಸುತ್ತಾರೋ ದಾಖಲಿಸಲಿ, ಎಲ್ಲದಕ್ಕೂ ನಾವು ಕಾನೂನಿನ ಮೂಲಕವೇ ಉತ್ತರ ನೀಡುತ್ತೇವೆ. ತಮಿಳುನಾಡಿನಲ್ಲಿ ಬಿಜೆಪಿಯ ಬಲವರ್ಧನೆಗಾಗಿ ರಾಜ್ಯ ಸರ್ಕಾರ ಕನ್ನಡಿಗರಿಗೆ ದ್ರೋಹ ಎಸಗುತ್ತಿದೆ. ಪಾದಯಾತ್ರೆ ನಡೆದರೆ ತಮ್ಮ ಈ ಮೋಸ ಬಯಲಾಗಬಹುದು ಎಂಬ ಭಯ ಬಿಜೆಪಿಯವರನ್ನು ಕಾಡಲು ಆರಂಭವಾಗಿದೆ. ಪಾದಯಾತ್ರೆಯನ್ನು ತಡೆಯುವ ಎಲ್ಲಾ ರೀತಿಯ ಪ್ರಯತ್ನಗಳು ಸರ್ಕಾರದಿಂದ ನಡೆಯುತ್ತಿದೆ. ಸರ್ಕಾರದ ಯಾವುದೇ ಬೆದರಿಕೆ ತಂತ್ರಗಳಿಗೆ ನಾವು ಮಣಿಯದೆ, ಹನ್ನೊಂದು ದಿನಗಳ ಕಾಲ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಸಿದ್ದರಾಮಯ್ಯನವರು ಹೇಳಿದರು.